ದೇಶ

ದೆಹಲಿ: ಶಾಪಿಂಗ್'ಗೆ ಕರೆದೊಯ್ಯಲು ಒಲ್ಲೆ ಎಂದ ಯುವಕನನ್ನು ಇರಿದು ಕೊಂದ ನೆರೆಮನೆಯಾತ!

Manjula VN
ನವದೆಹಲಿ: ಶಾಪಿಂಗ್'ಗೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ನಿರಾಕರಿಸಿದ ಯುವಕನೊಬ್ಬನ ಮೇಲೆ ತೀವ್ರವಾಗಿ ಕೆಂಡಾಮಂಡಲಗೊಂಡ ನೆರೆಮನೆಯಾತನೊಬ್ಬ ಇರಿದು ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯ ಜಹಾಂಗೀರ್ ಪುರ ಪ್ರದೇಶದಲ್ಲಿ ಗುರುವಾರ ನಡೆದಿದೆ. 
ದೀಪಕ್ ಅಲಿಯಾಸ್ ಬಲ್ಲಿ (19) ಮೃತ ಯುವಕನಾಗಿದ್ದಾರೆ. ಯೋಗೇಶ್ ಹತ್ಯೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 
ಬುಧವಾರ ರಾತ್ರಿ ಶಾಪಿಂಗ್'ಗೆ ಕರೆದೊಯ್ಯುವಂತೆ ಯೋಗೇಶ್, ದೀಪಕ್'ಗೆ ತಿಳಿಸಿದ್ದಾನೆ. ಈ ವಿಚಾರ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಇಬ್ಬರೂ ಸಮಾಧಾನಗೊಂಡು ಮನೆಗಳಿಗೆ ತೆರಳಿದ್ದಾರೆ. ಆದರೆ, ಆರೋಪಿ ಯೋಗೇಶ್ ಗುರುವಾರ ಬೆಳಿಗ್ಗೆ 11.40ರ ಸುಮಾರಿಗೆ ದೀಪಕ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಯೋಗೇಶ್ ಎದೆಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. 
ಕೂಡಲೇ ದೀಪಕ್ ನನ್ನು ಬಾಬು ಜಗಜೀವನ್ ರಾಮ್ ಮೆಮೋರಿಯಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ. 
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಯೋಗೇಶ್ ನನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ. 
SCROLL FOR NEXT