ವಸಂತ್ ಕುಂಜ್ ತ್ರಿವಳಿ ಕೊಲೆ: ತಂದೆ ಮೇಲಿನ ದ್ವೇಷಕ್ಕೆ ಕುಟುಂಬವನ್ನೇ ಸರ್ವನಾಶ ಮಾಡಿದ ಪುತ್ರ!
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ವಸಂತ್ ಕುಂಜ್ ನಲ್ಲಿ ನಡೆದ ತ್ರಿವಳಿ ಕೊಲೆ ರಹಸ್ಯ ಕಡೆಗೂ ಬಯಲಾಗಿದೆ. ದೆಹಲಿ ಜನತೆ ಬೆಚ್ಚಿ ಬೀಳುವಂತೆ ಮಾಡಿದ್ದ ಈ ಕೊಲೆಗಳನ್ನು ಸ್ವತಃ ಮಗನೇ ಮಾಡಿದ್ದನು ಎನ್ನುವುದು ಪೋಲೀಸ್ ತನಿಖೆಯಿಂದ ಸಾಬೀತಾಗಿದೆ.
19 ವರ್ಷದ ಮಗನೇ ತಂದೆ, ತಾಯಿ ಹಾಗೂ ತನ್ನ ಸೋದರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದನೆಂದು ಪೋಲೀಸರು ಹೇಳಿದ್ದಾರೆ. ಸಧ್ಯ ಆರೋಪಿ ಸೂರಜ್ ವರ್ಮಾ ನನ್ನು ಪೋಲೀಸರು ಬಂಧಿಸಿದ್ದಾರೆ. 44 ವರ್ಷದ ಮಿಥಿಲೇಶ್, ಸಿಯಾ ದಂಪತಿ ಮತ್ತು ಇವರ 16 ವರ್ಷದ ಮಗಳು ನೇಹಾ ಕೊಲೆಯ ಆರೋಪದ ಹಿನ್ನೆಲೆಯಲ್ಲಿ ಈತನ ಬಂಧನವಾಗಿದೆ.
ಉತ್ತರ ಪ್ರದೇಶ ಮೂಲದ ಮಿಥಿಲೇಶ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಾ ದೆಹಲಿಯಲ್ಲಿ ವಾಸವಿದ್ದರು ಇವರ ಮಗ ಸೂರಜ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಸರಿಯಾಗಿ ಕಾಲೇಜಿಗೆ ತೆರಳದೆ ಪೋಲಿ ಅಲೆಯುತ್ತಿದ್ದ. ಇದನ್ನು ಕಂಡ ಪೋಷಕರು ಮಗನಿಗೆ ಬುದ್ದಿ ಮಾತುಗಳನ್ನು ಹೇಳಿದ್ದಾರೆ. ಆದರೆ ಬುದ್ದಿವಾದವನ್ನು ಅರಿತು ನಡೆಯುವ ಬದಲು ತನಗೆ ಬುದ್ದಿ ಹೇಳಿದ್ದ ಪಾಲಕರ ಮೇಲೆಯೇ ಈತ ದ್ವೇಷ ಬೆಳೆಸಿಕೊಂಡಿದ್ದ.
ಮಂಗಳವಾರ ಸ್ನೇಹಿತರೊಡನೆ ಹೊರಗೆ ತೆರಳಿದ್ದ ಸೂರಜ್ ಮನೆಗೆ ಹಿಂತಿರುಗುವಾಗ ಒಂದು ಚೂರಿ ಹಾಗೂ ಒಂದು ಜೊತೆ ಕತ್ತರಿಗಳನ್ನು ಖರೀದಿಸಿ ತಂದಿದ್ದ.ಅಂದು ಮಧ್ಯರಾತ್ರಿಯವರೆಗೆ ಹೆತ್ತವರೊಡನೆ ಅವರ ಹಳೆಯ ಫೋಟೋ ಆಲ್ಬಂ ಗಳನ್ನು ನೋಡುತ್ತಾ ಕಾಲ ಕಳೆದಿದ್ದ ಸೂರಜ್ ಬುಧವಾರ ಬೆಳಗಿನ ಜಾವಮೂರರ ಸುಮಾರಿಗೆ ಹೆತ್ತವರು ಮಲಗಿದ್ದ ಕೋಣೆಗೆ ನುಗ್ಗಿದ್ದಾನೆ.ಅಲ್ಲಿ ತಂದೆ ಮಿಥಿಲೇಶ್ ಹಾಗೂ ತಾಯಿ ಸಿಯಾ ಅವರ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದಿದ್ದನು. ಬಳಿಕ ತನ್ನ ಸೋದರಿ ನೇಹಾ ಕೋಣೆಗೆ ನುಗ್ಗಿದ ಸೂರಜ್ ಅವಳ ಕತ್ತನ್ನು ಸೀಳಿ ಹತ್ಯೆಗೆ ಯತ್ನಿಸಿದ. ಆಗ ಗಂಭೀರ ಗಾಯಗೊಂಡಿದ್ದ ಅವನ ತಾಯಿ ಮಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲೇ ಅಲ್ಲಿಯೇ ಇದ್ದ ಸೂರಜ್ ತಾಯಿಗೆ ಸತತವಾಗಿ ಇರಿದು ಅವರನ್ನೂ ಕೊಲೆ ಮಾಡಿದ್ದಾನೆ.
ಇದಾದ ಬಳಿಕ ಮನೆಯಲ್ಲಿದ್ಸ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಲ್ಲದೆ ಕೃತ್ಯಕ್ಕೆ ಬಳಸಿದ ಚೂರಿಯನ್ನು ತೊಳೆದು ಸ್ವಚ್ಚವಾಗಿಸಿದ. ಅದರಲ್ಲಿದ್ದ ಬೆರಳಚ್ಚುಗಳನ್ನು ಅಳಿಸಿ ಹಾಕಿದ್ದ. ಕಡೆಗೆ ಸುಮಾರು ಎರಡು ಗಂಟೆ ಬಳಿಕ ಅಂದರೆ ಬೆಳಿಗ್ಗೆ ಐದಕ್ಕೆ ನೆರೆ ಮನೆಯವರನ್ನೆಲ್ಲಾ ಕರೆದು ನಮ್ಮ ಮನೆಗೆ ದರೋಡೆಕೋರರು ನುಗ್ಗಿದ್ದರು, ತಂದೆ-ತಾಯಿ, ಸೋದರಿಯರನ್ನು ಕೊಂದು ಹೋಗಿದ್ದಾರೆ ಎಂದು ಬೊಬ್ಬೆ ಹಾಕಿದ್ದಾನೆ.
ಈ ಕುರಿತಂತೆ ಪೋಲೀಸರು ಸೂರಜ್ ನನ್ನು ವಿಚಾರಣೆ ನಡೆಸಿದ್ದು ಆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ.ತನಗೆ ಅಪ್ಪನೆಂದರೆ ದ್ವೇಷವಿತ್ತು, ನನ್ನ ತಂಗಿ ಆಗಾಗ್ಗೆ ನನ್ನ ಮೊಬೈಲ್ ಚೆಕ್ ಮಾಡಿ, ನನ್ನ ಚಟುವಟಿಕೆಗಳ ಬಗ್ಗೆ ನನ್ನ ತಂದೆಗೆ ಹೇಳುತಿದ್ದಳು.ಅಲ್ಲದೆ ನನ್ನ ತಂದೆ ಹನ್ನೆರಡನ್ ತರಗತಿ ಕಲಿಯುವಾಗ ಅವರು ಕಟ್ಟಿಸುತ್ತಿದ್ದ ಹೊಸ ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡಿದ್ದರು. ಹೀಗಾಗಿ ನಾನು ಅನುತ್ತೀರ್ಣನಾದೆ, ಇದರಿಂದ ನನ್ನ ಭವಿಷ್ಯ ಹಾಳಾಗಿತ್ತು ಹೀಗಾಗಿ ಮೂವರನ್ನೂ ನಾನೇ ಕೊಲೆ ಮಾಡಿದೆ ಎಂದು ವಿವರಿಸಿದ್ದಾನೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos