ಟೊಂಕ್: ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಯೋತ್ಪಾದನೆ ನಿರ್ಮೂಲನೆ ನಿಟ್ಟಿನಲ್ಲಿ ತೀವ್ರ ಹೋರಾಟ ನಡೆಸಬೇಕಾಗಿದೆ. ಆದರೆ, ಕಾಶ್ನೀರಿ ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ನಿಲ್ಲಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾಶ್ಮೀರಿಗಳ ವಿರುದ್ಧ ನಾವು ಹೋರಾಟ ಮಾಡಲ್ಲ, ಆದರೆ, ಭಯೋತ್ಪಾದನೆ ವಿರುದ್ಧ ಹೋರಾಡುವುದಾಗಿ ರಾಜಸ್ತಾನದ ಟೊಂಕ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿ ಹೇಳಿದರು.
ದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಗಳು ನಡೆಯಬಾರದು, ಮನುಷ್ಯತ್ವದ ಮೇಲಿನ ಶತ್ರುಗಳ ಬಗ್ಗೆ ಹೋರಾಟ ನಡೆಸಬೇಕಾಗಿದೆ ಎಂದರು.
ಪುಲ್ವಾಮಾ ಉಗ್ರ ದಾಳಿಯ ಸಂಚುಕೋರರಿಗೆ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ. ಪಠಣ್ ಪುತ್ರ ನೇ ಆಗಿದ್ದಲ್ಲಿ ತಾನೇ ಆಡಿದ ಮಾತಿಗೆ ಬದ್ಧವಾಗಿರುವಂತೆ ತಾಕೀತು ಮಾಡಿದ್ದಾರೆ.
2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ ನಂತರ ಇಮ್ರಾನ್ ಖಾನ್ ಜೊತೆಗೆ ನಡೆಸಿದ ದೂರವಾಣಿ ಸಂಭಾಷಣೆಯನ್ನು ನೆನಪಿಸಿಕೊಂಡ ಮೋದಿ, ವಿಶ್ವ ಕ್ರಿಕೆಟ್ ನಿಂದ ನೀವು ಬಂದಿರುವುದಾಗಿ ಹೇಳಿದ್ದೆ. ಬಡತನ ಹಾಗೂ ಅನಕ್ಷರತೆ ನಿರ್ಮೂಲನೆಗಾಗಿ ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ಕಾರ್ಯನಿರ್ವಹಿಸುವಂತೆ ಮಾತನಾಡಿದ್ದೇ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್, ತಾನೂ ಪಠಣ್ ಸುಪುತ್ರನಾಗಿದ್ದು, ಯಾವಾಗಲೂ ಸತ್ಯವನ್ನೇ ನುಡಿಯುವುದಾಗಿ , ಸತ್ಯ ದಾರಿಯಲ್ಲಿಯೇ ನಡೆಯುವುದಾಗಿ ಹೇಳಿದ್ದರು. ಈಗ ತಾನೇ ಆಡಿದ ಮಾತನ್ನು ಸಾಕ್ಷಿಕರಿಸುವ ಸಂದರ್ಭ ಬಂದಿದೆ ಎಂದು ಮೋದಿ ತಾಕೀತು ಮಾಡಿದರು.