ಲೋಕಪಾಲ್, ಲೋಕಾಯುಕ್ತಕ್ಕಾಗಿ ಮತ್ತೆ ಅಣ್ಣಾ ಹಜಾರೆ ನಿರಶನ
ರಾಲೇಗಣ್ ಸಿದ್ದಿ: ಲೋಕಪಾಲ್ ಮಸೂದೆ ಜಾರಿ, ಪ್ರಬಲ ಲೋಕಾಯುಕ್ತಕ್ಕಾಗಿ ದಶಕದಿಂದ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ, ಈಗ ಮತ್ತೊಮ್ಮೆ ನಿರಶನ ಕೈಗೊಂಡಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಲೋಕಪಾಲ್, ಲೋಕಾಯುಕ್ತ ನೇಮಕ ಮಾಡುವುದಕ್ಕೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಒತ್ತಡ ಹೇರಲು ಅಣ್ಣಾ ಹಜಾರೆ ಮತ್ತೊಮ್ಮೆ ಉಪವಾಸ ಪ್ರತಿಭಟನೆ ಆರಂಭಿಸಿದ್ದಾರೆ.
ಜ.30 ರಂದು ಅವರು ಇರುವ ಗ್ರಾಮ ರಾಲೇಗಣ್ ಸಿದ್ದಿಯಲ್ಲಿ ನಿರಶನ ಕೈಗೊಂಡು ಮಾತನಾಡಿರುವ ಅಣ್ಣಾ ಹಜಾರೆ, ಲೋಕಪಾಲ್ ಮೂಲಕ ಪ್ರಧಾನಿ ವಿರುದ್ಧ ದೂರು ಬಂದು ಸಾಕ್ಷ್ಯ ಲಭ್ಯವಾದ ರೆ ಅದನ್ನು ತನಿಖೆ ನಡೆಸುವ ಅಧಿಕಾರವಿರುತ್ತದೆ. ಲೋಕಾಯುಕ್ತದಲ್ಲಿ ಮುಖ್ಯಮಂತ್ರಿಗಳು ಹಾಗೂ ಶಾಸಕರ ವಿರುದ್ಧ ಆರೋಪ ಕೇಳಿಬಂದು ಸಾಕ್ಷ್ಯ ಲಭ್ಯವಾದರೆ ಅವರ ವಿರುದ್ಧವೂ ತನಿಖೆ ನಡೆಸುವ ಅಧಿಕಾರ ವಿರುತ್ತದೆ. ಆದ್ದರಿಂದಲೇ ಈ ಎರಡೂ ಸಂಸ್ಥೆಗಳನ್ನು ರಾಜಕಾರಣಿಗಳು ವಿರೋಧಿಸುತ್ತಿದ್ದಾರೆ. ಯಾವುದೇ ಪಕ್ಷಕ್ಕೆ ಇದು ಬೇಕಾಗಿಲ್ಲ. 2013 ರಲ್ಲೇ ಸಂಸತ್ ನಲ್ಲಿ ಲೋಕಪಾಲ್ ಮಸೂದೆ ಅಂಗೀಕರಿಸಲಾಗಿದೆ ಆದರೆ ಲೋಕಪಾಲ್ ನ್ನು ನೇಮಕ ಮಾಡಲಾಗಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಇನ್ನು ಹಿಂದೊಮ್ಮೆ ತಮ್ಮ ಆಂಧೋಲನದಲ್ಲಿ ಸಕ್ರಿಯರಾಗಿದ್ದ ಈಗಿನ ರಾಜಕಾರಣಿಗಳಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಅಣ್ಣಾ ಹಜಾರೆ, ನಮಗೆ ನಮ್ಮ ವೇದಿಕೆ ಮೇಲೆ ಯಾವುದೇ ರಾಜಕಾರಣಿಗಳೂ ಬೇಕಿಲ್ಲ ಎಂದು ಹೇಳಿದ್ದಾರೆ.
ಲೋಕಪಾಲ್ ನ್ನು ನಿರ್ಬಂಧಿಸುವುದಕ್ಕೆ ಮತ್ತೊಂದು ಕಾನೂನು ತಂದು 3 ದಿನಗಳಲ್ಲೇ ರಾಷ್ಟ್ರಪತಿ ಅಂಕಿತವನ್ನೂ ಪಡೆದರು ಆದರೆ ಲೋಕಪಾಲ್ ನ್ನು ನೇಮಕ ಮಾಡುವುದಕ್ಕೆ 5 ವರ್ಷ ಕಳೆದರೂ ಏನೂ ಮಾಡಿಲ್ಲ. ರಾಜಕಾರಣಿಗಳಿಗೆ ನಮ್ಮ ವೇದಿಕೆ ಮೇಲೆ ಪ್ರವೇಶವಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos