ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಧಾನ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಜುಲೈ 31 ರವರೆಗೆ ಮಾತುಕತೆ ಮುಂದುವರಿಸುವಂತೆ ಎಫ್ ಎಂ ಐ ಕಲಿಫುಲ್ಲಾ ನೇತೃತ್ವದ ಅಯೋಧ್ಯಾ ಮಧ್ಯಸ್ಥಿಕೆ ತಂಡಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಮೇಲ್ಮನವಿಗಳ ವಿಚಾರಣೆಗೆ ಆಗಸ್ಟ್ 2 ಅಥವಾ ಅದರ ನಂತರದ ದಿನಾಂಕಗಳನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ನಿಗದಿಪಡಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠವು, ಮಧ್ಯಸ್ಥಿಕೆ ತಂಡ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಅದರಲ್ಲಿನ ವಿಷಯಗಳನ್ನು ಗಮನಿಸಿ ಜುಲೈ 31ರವರೆಗೆ ಸಂಧಾನ ಮಾತುಕತೆ ಮುಂದುವರಿಸುವಂತೆ ಸೂಚಿಸಿದೆ. ವಿವಾದದ ಕುರಿತ ವಿಚಾರಣೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸಿ ಮುಂದಿನ ವಿಚಾರಣೆ ಆಗಸ್ಟ್ 2 ರಂದು ನಡೆಸಿ, ಮುಂದಿನ ದಿನನಿತ್ಯದ ವಿಚಾರಣೆಗಳು ಹೇಗೆ ಮುಂದುವರಿಯುತ್ತದೆ ಎಂಬುದನ್ನು ಆಗ ತಿಳಿಸುವಂತೆ ನ್ಯಾಯಾಧೀಶರ ತಂಡಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.
ಮಧ್ಯಸ್ಥಿಕೆ ತಂಡ ಸಲ್ಲಿಸಿದ ವರದಿಯನ್ನು ಕೂಲಂಕುಷವಾಗಿ ಓದಿದ ಸಾಂವಿಧಾನಿಕ ಪೀಠ, ಈ ಹಿಂದೆ ನೀಡಿದ್ದ ಆದೇಶದಂತೆ ಇದರಲ್ಲಿನ ವಿಷಯಗಳನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದೆ.
ಆದರೂ, ಮಧ್ಯಸ್ಥಿಕೆ ತಂಡ ಸಲ್ಲಿಸಿದ ವರದಿಯಲ್ಲಿ ನಮ್ಮ ಗಮನಕ್ಕೆ ಬಂದಿರುವ ವಿಷಯಗಳನ್ನು ಅನುಸಾರ, ಕೇಸಿನ ವಿಚಾರಣೆಗೆ ದಿನಾಂಕವನ್ನು ಆಗಸ್ಟ್ 2 ಅಥವಾ ಅಂದಿನಿಂದ ನಿಗದಿಪಡಿಸಲಾಗುವುದು ಎಂದು ಸಾಂವಿಧಾನಿಕ ಪೀಠ ತಿಳಿಸಿದೆ.
ಜುಲೈ 31ರವರೆಗೆ ವಿಚಾರಣೆಯಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಗೆ ಬಂದವು ಎಂಬ ಕುರಿತು ಆಗಸ್ಟ್ 1ರೊಳಗೆ ಮಾಹಿತಿ ನೀಡುವಂತೆ ಸಹ ಮಧ್ಯಸ್ಥಿಕೆ ತಂಡಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos