ದೇಶ

20 ಮುಸ್ಲಿಂ ರಾಷ್ಟ್ರಗಳೇ ತ್ರಿವಳಿ ತಲಾಖ್ ನಿಷೇಧಿಸಿವೆ, ಭಾರತ ಏಕೆ ನಿಷೇಧಿಸಬಾರದು?: ಕೇಂದ್ರ

Lingaraj Badiger
ನವದೆಹಲಿ: ದೇಶದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದ್ದ ತ್ರಿವಳಿ ತಲಾಖ್‌ ತಿದ್ದುಪಡಿ ವಿಧೇಯಕವನ್ನು ಗುರುವಾರ ಲೋಕಸಭೆಯಲ್ಲಿ ಮೂರನೇ ಬಾರಿ  ಮಂಡಿಸಲಾಗಿದೆ.
ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧಿಸುವ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ 2019 ನ್ನು ಮಂಡಿಸಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ಈ ಮಸೂದೆ​​ ಧರ್ಮಾಧಾರಿತ ಅಲ್ಲ, ಬದಲಿಗೆ ಮಹಿಳೆಯರ ಸುರಕ್ಷತೆ ಮತ್ತು ಸಮಾನತೆಗಾಗಿ ಜಾರಿಯಾಗಬೇಕಿದೆ ಎಂದರು.
ಜನವರಿ 2017ರ ವರೆಗೆ ದೇಶದಲ್ಲಿ 574 ತ್ರಿವಳಿ ತಲಾಖ್ ಪ್ರಕರಣಗಳು ವರದಿಯಾಗಿವೆ. ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ನಿಷೇಧಿಸಿದ ನಂತರವೂ 300 ಪ್ರಕರಣಗಳು ನಡೆದಿವೆ ಎಂದು ಮಾಧ್ಯಮಗಳು ವರದಿ ಮಾಡಿರುವುದಾಗಿ ಸಚಿವರು ತಿಳಿಸಿದರು.
ಮುಸ್ಲಿಂ ಮಹಿಳೆಯರಿಗೆ ಭದ್ರತೆ ನೀಡುವ ಸಲುವಾಗಿ ಈ ಮಸೂದೆ​​​ ಜಾರಿಗೊಳಿಸಲಾಗುತ್ತಿದೆ. ಯಾವುದೇ ಸಮುದಾಯವಾಗಲೀ ನಾವು ಮಹಿಳೆಯರಿಗೆ ಒಳ್ಳೆಯದನ್ನು ಮಾಡುತ್ತೇವೆ. ಪಾಕಿಸ್ತಾನ ಹಾಗೂ ಮಲೇಷ್ಯಾ ಸೇರಿದಂತೆ 20 ಮುಸ್ಲಿಂ ರಾಷ್ಟ್ರಗಳೇ ತ್ರಿವಳಿ ತಲಾಖ್ ಅನ್ನು ನಿಷೇಧಿಸಿವೆ. ಜಾತ್ಯತೀತ ಭಾರತ ಏಕೆ ನಿಷೇಧಿಸಬಾರದು ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ಈ ಹಿಂದೆ ಎರಡು ಬಾರಿ ವಿಧೇಯಕ ಅಂಗೀಕಾರ ಆಗಿರಲಿಲ್ಲ. ಈಗಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ.
ತ್ರಿವಳಿ ತಲಾಖೆ ಮಸೂದೆಯಲ್ಲಿ ಕೆಲವು ಅಂಶಗಳು ಅಸಾಂವಿಧಾನಿಕವಾಗಿವೆ. ಈ ಕರಡು ಕಾನೂನನ್ನು ಇನ್ನಷ್ಟು ಆಳವಾಗಿ ಅವಲೋಕಿಸಬೇಕಾದ ಅಗತ್ಯವಿದೆ. ಹೀಗಾಗಿ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ ಒಳಗೊಂಡಿರುವ ಅಸಾಂವಿಧಾನಿಕ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ ಎಂದು ಈ ಬಾರಿಯೂ ವಿಧೇಯಕಕ್ಕೆ ಪ್ರಾದೇಶಿಕ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ.
SCROLL FOR NEXT