ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ನವದೆಹಲಿ: ಪಂಚ ರಾಜ್ಯಗಳಲ್ಲಿ ಫೊನಿ ಚಂಡಮಾರುತ ಅಬ್ಬರ ಆರಂಭವಾಗುತ್ತಿದ್ದಂತೆಯೇ ಅತ್ತ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿ ವಿವರ ಫೊನಿ ಅಬ್ಬರ ಎದುರಿಸಲು ಆಡಳಿತ ಯಂತ್ರ ಯಾವ ರೀತಿ ಸರ್ವಸನ್ನದ್ಧವಾಗಿದೆ ಎಂಬ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ, ಗೃಹ ಸಚಿವಾಲಯದ ಕಾರ್ಯದರ್ಶಿ, ಭಾರತೀಯ ಹವಾಮಾನ ಇಲಾಖೆ, ಎನ್ ಡಿಆರ್ ಎಫ್, ಎನ್ ಡಿಎಂಎ ಅಧಿಕಾರಿಗಳು ಭಾಗವಹಿಸಿದ್ದರು.
ರಾಷ್ಟ್ರೀಯ ವಿಕೋಪ ಪರಿಹಾರ ಪಡೆ (ಎನ್ಡಿಆರ್ಎಫ್), ರಾಷ್ಟ್ರೀಯ ವಿಕೋಪ ಬಿಕ್ಕಟ್ಟು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ತಂಡಗಳ ರವಾನೆ, ನೌಕಾಪಡೆ ಮತ್ತು ಸೇನಾಪಡೆಯಿಂದ ಅಗತ್ಯ ಹೆಲಿಕಾಪ್ಟರ್ ಮತ್ತು ಸಿಬ್ಬಂದಿ ನಿಯೋಜನೆ, ತೀರ ಪ್ರದೇಶದ ಸಂತ್ರಸ್ತರಿಗೆ ಕುಡಿಯುವ ನೀರು ಮತ್ತು ಆಹಾರ ಪೂರೈಕೆ ವ್ಯವಸ್ಥೆ, ತಾತ್ಕಾಲಿಕ ವಿದ್ಯುತ್ ಮತ್ತು ದೂರವಾಣಿ ಸೇವೆಗಳ ಪೂರೈಕೆ, ತೀರ ಪ್ರದೇಶದ ನಿವಾಸಿಗಳ ಸ್ಥಳಾಂತರ ಸೇರಿ ಹತ್ತು-ಹಲವು ಸಿದ್ಧತಾ ಕ್ರಮಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಿತು. ಅಧಿಕಾರಿಗಳಿಂದ ವಿವರ ಪಡೆದುಕೊಂಡ ಪ್ರಧಾನಿ ಮೋದಿ, ಜೀವಹಾನಿ ಸಂಭವಿಸದಂತೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos