ದೇಶ

ಆಂಧ್ರ ಪ್ರದೇಶ: ಹಗ್ಗ ದಾಟಿ ಬರಬೇಡಿ, 'ಲಕ್ಷ್ಮಣರೇಖೆ'ಹಾಕಿದ ತಹಶಿಲ್ದಾರ್ ಮಹೇಶ್ವರಿ

Sumana Upadhyaya

ಕರ್ನೂಲು: ಲಕ್ಷ್ಮಣರೇಖೆ ಎಂಬ ಪದವನ್ನು ನಾವೆಲ್ಲರೂ ಕೇಳಿರುತ್ತೇವೆ. ಗಡಿ ಮೀರಿ ಹೋಗಬಾರದೆನ್ನುವ ಸಂದರ್ಭದಲ್ಲಿ ಈ ಲಕ್ಷ್ಮಣರೇಖೆಯನ್ನು ಜನ ಬಳಸುತ್ತಾರೆ.


ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಪತಿಕೊಂಡದ ತಹಶಿಲ್ದಾರ್ ಮಹೇಶ್ವರಿ ಇದನ್ನು ಅಕ್ಷರಶಃ ತಮ್ಮ ಕಚೇರಿಯಲ್ಲಿ ಅಳವಡಿಸಿದ್ದಾರೆ.ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ತಮ್ಮನ್ನು ಭೇಟಿ ಮಾಡಲು ಬರುವ ಜನರು ಕಚೇರಿಯಲ್ಲಿ ಈ ಗಡಿ ದಾಟಿ ಬರಬಾರದು ಎಂದು ಲಕ್ಷ್ಮಣರೇಖೆಯ ರೂಪದಲ್ಲಿ ಹಗ್ಗ ಕಟ್ಟಿದ್ದಾರೆ. ಕಳೆದ ವಾರ ತೆಲಂಗಾಣದಲ್ಲಿ ತಹಶಿಲ್ದಾರ್ ವಿಜಯ ರೆಡ್ಡಿಯವರನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ ನಂತರ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗೆ ಅದರಲ್ಲೂ ಮಹಿಳಾ ಸಿಬ್ಬಂದಿಗೆ ಭೀತಿ ಎದುರಾಗಿದೆ. ತಮ್ಮ ಜೀವಕ್ಕೆ ಭದ್ರತೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ನಿಟ್ಟಿನಲ್ಲಿ ಮಹೇಶ್ವರಿ ತಮ್ಮ ಕಚೇರಿಯಲ್ಲಿ ಹಗ್ಗ ಕಟ್ಟಿಬಿಟ್ಟಿದ್ದಾರೆ. 


ಸ್ಥಳೀಯರು ಮಹೇಶ್ವರಿಯವರ ಕಚೇರಿಗೆ ಹೋದರೆ ಹಗ್ಗ ಕಟ್ಟಿದ ಇನ್ನೊಂದು ಕಡೆ ನಿಂತು ತಾವು ಬಂದಿರುವ ಕೆಲಸಗಳ ಬಗ್ಗೆ ಹೇಳಿಕೊಳ್ಳಬೇಕು. ಹಗ್ಗ ದಾಟಿ ಅವರ ಬಳಿ ಹೋಗುವಂತಿಲ್ಲ. ಇದರಿಂದ ನಮಗೆ ತೀವ್ರ ತೊಂದರೆಯಾಗುತ್ತದೆ. ನಾವು ಎಂದಿಗೂ ಮಹೇಶ್ವರಿಯವರ ಜೊತೆ ಅನುಚಿತವಾಗಿ ನಡೆದುಕೊಂಡಿಲ್ಲ, ಹೀಗಿರುವಾಗ ಅವರು ಅನವಶ್ಯಕವಾಗಿ ಈ ವರ್ತನೆ ತೋರಿಸುತ್ತಿರುವುದು ಸರಿಯಲ್ಲ ಎನ್ನುತ್ತಾರೆ ಸ್ಥಳೀಯರು.


ಈ ಬಗ್ಗೆ ಮಾಧ್ಯಮದವರು ಮಹೇಶ್ವರಿಯವರನ್ನು ಕೇಳಿದರೆ ತಮ್ಮ ಸುರಕ್ಷತೆ ಬಗ್ಗೆ ಆತಂಕವಿದೆ. ಅನೇಕ ಸಂದರ್ಭಗಳಲ್ಲಿ ಪುರುಷರು ಅಸಹಜ ಸ್ಥಿತಿಯಲ್ಲಿ ತಮ್ಮ ಕಚೇರಿಗೆ ಬಂದು ಕ್ರೂರವಾಗಿ ನಡೆದುಕೊಂಡ ಉದಾಹರಣೆಗಳಿವೆ.ಹೀಗಾಗಿ ಕಳೆದ ವಾರ ತಹಶಿಲ್ದಾರ್ ಹತ್ಯೆಯ ಬಳಿಕ ತಾನು ಈ ರೀತಿ ಹಗ್ಗ ಕಟ್ಟಿಕೊಂಡಿದ್ದು ತಮ್ಮ ಕೆಳಗಿನ ಅಧಿಕಾರಿಗೆ ಸಹ ಸುರಕ್ಷಿತ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದೇನೆ ಎಂದರು.

SCROLL FOR NEXT