ದೇಶ

ಪಾಕಿಸ್ತಾನ ಭಾರತಕ್ಕೆ ಮಾತ್ರ ಅಲ್ಲ, ಇಡೀ ಜಗತ್ತಿಗೆ ಸಮಸ್ಯಾತ್ಮಕ ದೇಶ: ರಾಮ್ ಮಾಧವ್

Lingaraj Badiger

ನವದೆಹಲಿ: ಪಾಕಿಸ್ತಾನ ಕೇವಲ ನೆರೆಯ ಭಾರತಕ್ಕೆ ಮಾತ್ರ ಸಮಸ್ಯೆಯಾಗಿಲ್ಲ, ಇಡೀ ಜಗತ್ತಿಗೆ ಸಮಸ್ಯಾತ್ಮಕ ರಾಷ್ಟ್ರವಾಗಿ ಪರಿಣಮಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಅವರು ಸೋಮವಾರ ಹೇಳಿದ್ದಾರೆ.

ಪಾಕಿಸ್ತಾನ ಪ್ರಸ್ತುತ ಭಯೋತ್ಪಾದನೆ ಉಗಮದ ಕೇಂದ್ರಬಿಂದುವಾಗಿದೆ ಎಂದು ವಿಶ್ಲೇಷಿಸಿ ಬಿಜೆಪಿ ನಾಯಕ, ಜಗತ್ತಿನ ಶಾಂತಿಗೆ ಸಮಸ್ಯೆಯಾಗಿರುವ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು ಎಂದು ವಿಶ್ವದ ಎಲ್ಲ ದೇಶಗಳು ಪಾಕಿಸ್ತಾನ ಮೇಲೆ ಒತ್ತಡ ತರಬೇಕು ಎಂದು ಕರೆ ನೀಡಿದ್ದಾರೆ.

ಅಮೆರಿಕ - ಭಾರತ ಕಾರ್ಯತಂತ್ರ ಸಹಭಾಗಿತ್ವ ವೇದಿಕೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಭಯ ದೇಶಗಳ ನಡುವೆ ಮಾತುಕತೆ ಪ್ರಸ್ತಾಪ, ರಾಜತಾಂತ್ರಿಕ ಸಂಬಂಧಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಏಳು ದಶಕಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಣ ಸಂಬಂಧಗಳಲ್ಲಿ ಏರುಪೇರುಗಳಿದ್ದರೂ ಅದು ಮುಂದುವರಿದಿದೆ ಎಂದು ಉತ್ತರಿಸಿದರು.

ನೆರೆಯ ದೇಶ ಪಾಕಿಸ್ತಾನದೊಂದಿಗೆ ಸದಾ ಸ್ನೇಹಪೂರ್ವಕ ಸಂಬಂಧವನ್ನು ಭಾರತ ಬಯಸುತ್ತದೆ, ಆದರೆ, ಗಡಿಯಾಚೆಗಿನ ಭಯೋತ್ಪಾದನೆ ಉಭಯ ದೇಶಗಳ ನಡುವಣ ನಿಜವಾದ ಸಮಸ್ಯೆ ಎಂದು ಅವರು ಸ್ಪಷ್ಟಪಡಿಸಿದರು.

ಪಾಕಿಸ್ತಾನ ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿದೆ, ಇದರಿಂದ ಭಾರತ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳು ಪಾಕಿಸ್ತಾನದೊಂದಿದೆ ಸಂಬಂಧ ಹೊಂದಲು ಹಿಂದು ಮುಂದು ನೋಡುತ್ತಿವೆ ಎಂದು ರಾಮ್ ಮಾಧವ್ ವ್ಯಾಖ್ಯಾನಿಸಿದರು.

ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹಾಗೂ ಮಾತುಕತೆ ಮುಂದುವರಿಸಲು ಈ ಹಿಂದೆ ಹಲವು ದೇಶಗಳು ಭಾರತಕ್ಕೆ ಸಲಹೆ ನೀಡಿದ್ದವು. ಆದರೆ, ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದುವಾಗಿ ರೂಪುಗೊಂಡಿರುವ ಕಾರಣ, ವಿಶ್ವದ ರಾಷ್ಟ್ರಗಳು ಮತ್ತೆ ಈ ಸಲಹೆಯನ್ನು ಭಾರತಕ್ಕೆ ನೀಡಲ್ಲ ಎಂದರು.

ಭಾರತ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನ ಜಗತ್ತಿನ ರಾಷ್ಟ್ರಗಳ ಮುಂದೆ ಏಕಾಂಗಿಯಾಗಿದೆ ಎಂದು ರಾಮ್ ಮಾಧವ್ ಹೇಳಿದರು.

SCROLL FOR NEXT