ನವದೆಹಲಿ:ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕೇವಲ ಕಲ್ಲುಗಳನ್ನು ಮಾತ್ರ ಬಳಸಿ ನಿರ್ಮಿಸಲಾಗುವುದು. ಇದರಿಂದ ಸಾವಿರ ವರ್ಷಕ್ಕೂ ಅಧಿಕ ಕಾಲ ಗಟ್ಟಿಯಾಗಿ ಉಳಿಯುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ ನ(ವಿಎಚ್ ಪಿ) ಹಿರಿಯ ಕಾರ್ಯಕಾರಿ ಕೂಡ ಆಗಿರುವ ಚಂಪತ್ ರೈ, ಐಐಟಿ ಚೆನ್ನೈ ಮತ್ತು ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ(ಸಿಬಿಆರ್ ಐ)ಗಳು ಮಂದಿರದ ನಿರ್ಮಾಣ ಕಾರ್ಯದಲ್ಲಿ ತೊಡಗಲಿವೆ ಎಂದು ಹೇಳಿದ್ದಾರೆ.
ದೇವಾಲಯದ ನಿರ್ಮಾಣವನ್ನು ಲಾರ್ಸೆನ್ ಮತ್ತು ಟೌಬ್ರೊ ನೋಡಿಕೊಳ್ಳಲಿದ್ದು, ಐಐಟಿ ಚೆನ್ನೈಯನ್ನು ಮಣ್ಣಿನ ಗಟ್ಟಿತನದ ಪರೀಕ್ಷೆಗೆ ಮತ್ತು ಸಿಬಿಆರ್ ಸೇವೆಯನ್ನು ಮಂದಿರದ ಕಟ್ಟಡ ಭೂಕಂಪವನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುತ್ತದೆಯೇ ಎಂದು ಪರೀಕ್ಷಿಸಲು ಬಳಸಿಕೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ಚಂಪತ್ ರೈ ತಿಳಿಸಿದರು.
ಸುಮಾರು 10 ಸಾವಿರ ತಾಮ್ರದ ಸಲಾಕೆಗಳನ್ನು ನಿರ್ಮಾಣ ಕಾರ್ಯಕ್ಕೆ ಬಳಸಲಾಗುತ್ತದೆ. ದೇಶದಲ್ಲಿ ಹಲವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಒಂದು ಭಾವನಾತ್ಮಕ ವಿಷಯವಾಗಿದ್ದು ನಿರ್ಮಾಣ ಕಾರ್ಯಕ್ಕೆ ಕೊಡುಗೆ ನೀಡಲು ಇಚ್ಛಿಸುವವರು ತಾಮ್ರದ ಸಲಾಕೆಗೆ ಹಣವನ್ನು ದಾನ ಮಾಡಬಹುದು ಎಂದಿದ್ದಾರೆ.
ಕಲ್ಲುಗಳನ್ನು ಮಾತ್ರ ಬಳಸಿದರೆ ಮಂದಿರ ಗಾಳಿ, ಬೆಳಕು, ನೀರಿಗೆ ಹಾಳಾಗುವುದಿಲ್ಲ ಮತ್ತು ಸಾವಿರಕ್ಕೂ ಹೆಚ್ಚು ವರ್ಷ ಕಾಲ ಬಾಳುತ್ತದೆ ಎಂದು ಚಂಪತ್ ರೈ ಹೇಳುತ್ತಾರೆ.