ದೇಶ

ಕೇರಳದಲ್ಲಿ ಮರ್ಯಾದಾ ಹತ್ಯೆ! ಅಂತರ್ಜಾತಿ ವಿವಾಹವಾಗಿದ್ದಕ್ಕೆ 27 ವರ್ಷದ ವ್ಯಕ್ತಿ ಬರ್ಬರ ಕೊಲೆ

Raghavendra Adiga

ಪಾಲಕ್ಕಾಡ್: ಮರ್ಯಾದಾ ಹತ್ಯೆಯ ಆರೋಪದಲ್ಲಿ ಯುವಕನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.

ಕುಳ್ಹಲ್ಮನ್ನಂನ ಎಳಮಂಡಲಂ ನಿವಾಸಿ ಅನೀಶ್ (27) ಹತ್ಯೆಯಾಗಿರುವ ವ್ಯಕ್ತಿ.ಈತ ತೆಂಕುರಿಸಿ ಸಮೀಪದ ಮನಂಕುಳಂಬು ಶಾಲೆಯ ಬಳಿ ಶುಕ್ರವಾರ ಹೆಣವಾಗಿ ಪತ್ತೆಯಾಗಿದ್ದಾನೆ. ಈ ಹತ್ಯೆ ಆರೋಪದಲ್ಲಿ ಬಂಧಿತರಾದವರನ್ನು ಮೃತ ಅನೀಶ್ ನ ಪತ್ನಿಯ ತಂದೆ ಮತ್ತು ಚಿಕ್ಕಪ್ಪ ಎಂದು ಗುರುತಿಸಲಾಗಿದೆ. 

ಇದೊಂದು ಮರ್ಯಾದಾ ಹತ್ಯೆ ಪ್ರಕರಣ ಎಂದು  ಅನೀಶ್ ಸಂಬಂಧಿಕರು ಆರೋಪಿಸಿದ್ದಾರೆ. ಅವರ ಪ್ರಕಾರ ಆರೋಪಿಗಳು ಅನೀಶ್‌ಗೆ ಬೆದರಿಕೆ ಹಾಕಿದ್ದು "ನೀನಿನ್ನು ಕೇವಲ ಮೂರು ತಿಂಗಳು ಮಾತ್ರ ಬದುಕಿರುತ್ತೀಯೆ" ಎಂದು ತಿಳಿಸಿದ್ದರು. ಈ ಬಗ್ಗೆ ಅನೀಶ್ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಅನೀಶ್ ಮತ್ತು ಅವರ ಪತ್ನಿ ಹರಿತಾ ಶಾಲಾ ದಿನಗಳಿಂದ ಪರಸ್ಪರ ಪರಿಚಯವಾಗಿದ್ದು ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಮೂರು ತಿಂಗಳ ಹಿಂದೆ ಅವರು ವಿವಾಹ ನೊಂದಣಿ ಮಾಡಿಸಿಕೊಂಡಿದ್ದರು.

ಕೊಲೆಯಾದ ಅನೀಶ್ ಹಾಗೂ ಆತನ ಪತ್ನಿ

ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದರಿಂದ ಹರಿತಾ ಕುಟುಂಬ ಮದುವೆಗೆ ವಿರೋಧಿಸಿತ್ತು ಎಂದು ಅನೀಶ್ ಅವರ ಸಂಬಂಧಿಕರು ಮತ್ತು ಸ್ನೇಹಿತರು ಹೇಳಿದ್ದಾರೆ. ಇದು ಅನೀಶ್ ನ ಕೊಲೆಗೆ ಪ್ರೇತಣೆಯಾಗಿದೆ ಎಂದು ಅವರು ಶಂಕಿಸಿದ್ದಾರೆ. ಅನೀಶ್ ತನ್ನ ಮೋಟಾರುಬೈಕಿನಲ್ಲಿ ದಿನಸಿ ವಸ್ತುಗಳನ್ನು ಖರೀದಿಸಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅಂಗಡಿಯೊಂದರಲ್ಲಿ ಅನೀಶ್ ದಿನಸಿ ಖರೀದಿಸುವ ವೇಳೆ ಇಬ್ಬರು ವ್ಯಕ್ತಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಅನೀಶ್ ಮೃತಪಟ್ಟಿದ್ದನು.

ಮೃತನ ಶವವನ್ನು ಪಾಲಕ್ಕಾಡ್‌ನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಕುಳ್ಹಲ್ಮನ್ನಂ ಪೋಲೀಸರು ತಿಳಿಸಿದ್ದಾರೆ.

SCROLL FOR NEXT