ದೇಶ

ಮೋದಿ ವಿರುದ್ಧ ಘೋಷಣೆ ಕೂಗಿದವರನ್ನು ಜೀವಂತ ಸುಟ್ಟು ಹಾಕುತ್ತೇನೆ:ಉ.ಪ್ರ ಸಚಿವ ರಘುರಾಜ್ ಸಿಂಗ್ 

Sumana Upadhyaya

 ಆಲಿಘಡ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದರೆ ಅವರನ್ನು ಜೀವಂತ ಸುಡಲಾಗುವುದು ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಸಚಿವ ರಘುರಾಜ್ ಸಿಂಗ್ ವಿವಾದ ಸೃಷ್ಟಿಸಿದ್ದಾರೆ.


ಪೌರತ್ವ ತಿದ್ದುಪಡಿ ಕಾಯ್ದೆ ಪರ ಆಲಿಘಡದಲ್ಲಿ ನಿನ್ನೆ ಅವರು ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಹೀಗೆ ಹೇಳಿದ್ದರು. ಪ್ರಧಾನಿ ಮೋದಿ ಮತ್ತು ಸಿಎಂ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗಿದರೆ ನಾನು ನಿಮ್ಮನ್ನು ಜೀವಂತ ಸುಟ್ಟುಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.


ಸಿಎಎ ವಿರುದ್ಧ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.


ಈ ಬಗ್ಗೆ ಮಾತನಾಡಿದ ಸಚಿವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಶೇಕಡಾ 1ರಷ್ಟು ಜನ ಭಾರತದಲ್ಲಿದ್ದುಕೊಂಡು ನಮ್ಮ ತೆರಿಗೆ ಹಣ ತಿಂದುಕೊಂಡು ನಮ್ಮ ನಾಯಕರ ವಿರುದ್ಧವೇ ಘೋಷಣೆಗಳನ್ನು ಕೂಗುತ್ತಾರೆ. ಈ ದೇಶ ಎಲ್ಲಾ ಜಾತಿ, ಧರ್ಮ, ನಂಬಿಕೆಯನ್ನು ಹೊಂದಿರುವ ಜನರಿಗೆ ಸೇರಿದ್ದು. ಆದರೆ ಪ್ರಧಾನಿ ಮತ್ತು ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದರೆ ಒಪ್ಪುವುದಿಲ್ಲ ಎಂದಿದ್ದಾರೆ.


ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ವಿರುದ್ಧ ವಾಗ್ದಾಳಿ ನಡೆಸಿ, ನೆಹರೂರವರ ಜಾತಿ ಯಾವುದು, ಅವರಿಗೆ ಖಾನ್ ದಾನ್ ಇರಲಿಲ್ಲ ಎಂದಿದ್ದಾರೆ. ರಘುರಾಜ್ ಸಿಂಗ್ ಉತ್ತರ ಪ್ರದೇಶ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದಾರೆ.

SCROLL FOR NEXT