ದೇಶ

ವ್ಯವಸ್ಥೆ ಬದಲಾವಣೆ ಮಾಡುವಲ್ಲಿ ವಿಫಲ: ಅವಧಿಗೂ ಮುನ್ನ ನಿವೃತ್ತಿಗೆ ಮುಂದಾದ ಐಪಿಎಸ್ ಅಧಿಕಾರಿ

Srinivas Rao BV

ನವದೆಹಲಿ: ವ್ಯವಸ್ಥೆ ಬದಲಾವಣೆ ಮಾಡುವಲ್ಲಿ ವಿಫಲನಾಗಿದ್ದೇನೆ ಎಂದು ತೆಲಂಗಾಣ ರಾಜ್ಯ ಪೊಲೀಸ್ ಅಕಾಡೆಮಿ (ಟಿಎಸ್ ಪಿಎ)ಯ ನಿರ್ದೇಶಕ ವಿ.ಕೆ ಸಿಂಗ್ ಅವಧಿಗೂ ಮುನ್ನವೇ ನಿವೃತ್ತಿ ಬಯಸಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. 

ಪೊಲೀಸ್ ಇಲಾಖೆಗೆ ಸೇರುವಾಗ ಹಲವು ಕನಸುಗಳನ್ನು ಹೊತ್ತಿದ್ದೆ. ಪೊಲೀಸ್ ವ್ಯವಸ್ಥೆಯ ಬದಲಾವಣೆಯ ಕನಸು ನನಸಾಗಿಯೇ ಉಳಿಯಿತು, ವ್ಯವಸ್ಥೆಯ ಬದಲಾವಣೆಯಲ್ಲಿ ವಿಫಲನಾಗಿದ್ದೇನೆ ಈ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ನಿವೃತ್ತಿಗೆ ಅನುಮತಿ ನೀಡಬೇಕೆಂದು ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದು, 2020 ರ ಅಕ್ಟೋಬರ್ 2 ರಂದು ನಿವೃತ್ತಿಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ. 1987 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಸಿಂಗ್, ಈ ವರ್ಷದ ನವೆಂಬರ್ ತಿಂಗಳಲ್ಲಿ ನಿವೃತ್ತರಾಗಬೇಕಿತ್ತು.

ತಾವು ಅವಧಿಗೂ ಮುನ್ನವೇ ನಿವೃತ್ತಿ ಬಯಸಿ ಪತ್ರಬರೆದಿರುವುದನ್ನು ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಹೊರಗೆ ತಮ್ಮ ಸೇವೆ ಬಳಕೆಯಾಗಬಹುದೆಂಬ ಅಭಿಪ್ರಾಯ ಸಿಂಗ್ ಅವರದ್ದಾಗಿದೆ. ಜನರ ನಡುವೆ ಬದಲಾವಣೆ, ಸುಧಾರಣೆ ತರಲು ಕೆಲಸ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯಾದ ಅ.2 ರಂದು ಸರ್ಕಾರಿ ಸೇವೆಯಿಂದ ನಿವೃತ್ತಿ ಬಯಸಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.

ನನ್ನ ಸೇವೆಗಳಿಂದ ತೆಲಂಗಾಣ ಸರ್ಕಾರವೂ ಸಂತುಷ್ಟವಾಗಿಲ್ಲ. ಸರ್ಕಾರದ ಸೇವೆಗಳನ್ನು ಉತ್ತಮಗೊಳಿಸಲು ನನ್ನ ಸಲಹೆಗಳೂ ವ್ಯವಸ್ಥೆಯನ್ನು ಹೆಚ್ಚು ಬದಲಾವಣೆ ಮಾಡಲು ಸಾಧ್ಯವಾಗಲಿಲ್ಲ. ನಾನು ಸರ್ಕಾರಕ್ಕೆ ಹೊರೆಯಾಗಬಾರದೆಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿದ್ದೀನಿ, ಸರ್ಕಾರದ ವಿರುದ್ಧ ಏನೂ ಇಲ್ಲ ಎಂದು ಸಿಂಗ್ ಹೇಳಿದ್ದಾರೆ. ಸ್ಪಷ್ಟ ನ್ಯಾಯದ ಕಲ್ಪನೆ, ಸ್ಪಷ್ಟ ಆತ್ಮಸಾಕ್ಷಿಯೊಂದಿಗೆ ಕೆಲಸ ಮಾಡಿದರೆ ಪೊಲೀಸ್ ವೃತ್ತಿ ಅತ್ಯುತ್ತಮವಾದ್ದು, ಯಾರಾದರೂ ಸರ್ಕಾರಿ ಸೇವೆಗೆ ಸೇರಬೇಕೆಂದರೆ ನಾನು ಪೊಲೀಸ್ ಸೇವೆಗೆ ಸೇರಿ ಎಂದೇ ಹೇಳುತ್ತೇನೆ ಎಂದು ಸಿಂಗ್ ಹೇಳಿದ್ದಾರೆ.

SCROLL FOR NEXT