ದೇಶ

ಸಿಎಎ ವಿರೋಧಿ ಪ್ರತಿಭಟನಾಕಾರರ ಹೆಸರು, ಫೋಟೋ ಪ್ರದರ್ಶನ: ಯೋಗಿ ಸರ್ಕಾರಕ್ಕೆ ಹೈಕೋರ್ಟ್ ನಲ್ಲಿ ತೀವ್ರ ಮುಖಭಂಗ

Lingaraj Badiger

ಲಖನೌ: ಉತ್ತರ ಪ್ರದೇಶದ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ತೀವ್ರ ಮುಖಭಂಗವಾಗಿದ್ದು, ಸಿಎಎ ವಿರುದ್ಧ ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದವವರ ಹೆಸರು ಹಾಗೂ ಫೋಟೋ ಒಳಗೊಂಡ ಫಲಕಗಳನ್ನು ಕೂಡಲೇ ತೆರವುಗೊಳಿಸುವಂತೆ ಅಲಹಾಬಾದ್  ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. 

ಮಾರ್ಚ್ ೧೬ ರೊಳಗೆ ಈ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ  ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ನಗರ  ಪೊಲೀಸ್ ಆಯುಕ್ತರಿಗೆ  ಕೋರ್ಟ್  ಆದೇಶಿಸಿದೆ.

ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆಸಿದವರ ಫೋಟೋ, ವಿಳಾಸ ಒಳಗೊಂಡ  ಫಲಕಗಳನ್ನು  ಲಖನೌದ ಹಲವು ಕಡೆ ಕಳೆದ ವಾರ ರಾಜ್ಯ ಸರ್ಕಾರ ಅಳವಡಿಸಿತ್ತು. ಇದು ತೀವ್ರ ವಿವಾದ ಸೃಷ್ಟಿಸಿತ್ತು. 

ಕಳೆದ ಡಿಸೆಂಬರ್‌ನಲ್ಲಿ ನಡೆದ ಸಿಎಎ ವಿರೋಧಿ ಗಲಭೆಯಲ್ಲಿ ಭಾಗಿಯಾದ ಆರೋಪದ ಮೇಲೆ ೫೩ ಮಂದಿಯ ಫೋಟೋಗಳು ಹಾಗೂ ವಿವರಗಳೊಂದಿಗೆ ಫಲಕಗಳನ್ನು ರಾಜ್ಯ ಸರ್ಕಾರ ಅಳವಡಿಸಿತ್ತು. ಶಿಯಾ ಧರ್ಮ ಗುರು ಮೌಲಾನಾ ಸೈಫ್ ಅಬ್ಬಾಸ್, ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್. ದಾರಪುರಿ ಮತ್ತು ಕಾಂಗ್ರೆಸ್ ಮುಖಂಡ ಸದಾಫ್ ಜಾಫರ್  ಅವರ  ಪೋಟೋಗಳು ಇದರಲ್ಲಿ ಒಳಗೊಂಡಿದ್ದವು.

ಸರ್ಕಾರಿ ಆಸ್ತಿ ನಾಶಪಡಿಸಿದವರು ಸೂಕ್ತ ದಂಡ ಪಾವತಿಸದಿದ್ದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿತ್ತು. ಈ  ಸಂಬಂಧ ಆರೋಪಿಗಳಿಗೆ ಸರ್ಕಾರ ನೊಟೀಸ್ ಸಹ ನೀಡಿತ್ತು. 

ಈ ಸಂಬಂಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಹೈಕೋರ್ಟ್, ಪ್ರತಿಭಟನಾಕಾರರ ಹೆಸರು ಮತ್ತು ಫೋಟೋಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ನ್ಯಾಯಯುತವಲ್ಲ. ಸರ್ಕಾರದ ಕ್ರಮ ನಾಗರಿಕರ  ಖಾಸಗಿ ಹಕ್ಕಗಳಲ್ಲಿ ಹಸ್ತಕ್ಷೇಪ  ಮಾಡಿದಂತೆ ಎಂದು ಅಭಿಪ್ರಾಯಪಟ್ಟಿದೆ.

SCROLL FOR NEXT