ದೇಶ

''ನನ್ನ ತಲೆ ಕತ್ತರಿಸಿ'' ಕೋಲ್ಕತ್ತಾದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಿದವರ ವಿರುದ್ಧ ಮಮತಾ ಬ್ಯಾನರ್ಜಿ ಅಸಹನೆ

Sumana Upadhyaya

ಕೋಲ್ಕತ್ತಾ: ಆಂಫಾನ್ ಚಂಡಮಾರುತ ಅಪ್ಪಳಿಸಿ ಬೃಹತ್ ಪ್ರಮಾಣದಲ್ಲಿ ನಷ್ಟವುಂಟಾದ ನಂತರ ವಿದ್ಯುತ್ ಸೇರಿದಂತೆ ಇತರ ಅಗತ್ಯ ಸೇವೆಗಳ ಪುನರ್ ಸ್ಥಾಪನೆಗೆ ಇನ್ನು ಸ್ವಲ್ಪ ದಿನಗಳ ಕಾಲಾವಕಾಶ ಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಳಿದ್ದಾರೆ.

ಚಂಡಮಾರುತ ಅಪ್ಪಳಿಸಿ ಹಾನಿಯುಂಟಾಗಿ ಎರಡು ದಿನಗಳಾಗಿದೆಯಷ್ಟೆ. ನಾವೆಲ್ಲರೂ ಮೊದಲಿನ ಸ್ಥಿತಿಗೆ ತರಲು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇವೆ. ಸಹಾಯಕ್ಕೆ ಸೇನೆಯ ಮೊರೆ ಹೋಗಿದ್ದೇವೆ. ದಯಮಾಡಿ ಸ್ವಲ್ಪ ತಾಳ್ಮೆಯಿಂದ ಕಾಯಿರಿ. ಸಾಧ್ಯವಾದಷ್ಟು ಮೊದಲಿನ ಸ್ಥಿತಿಗೆ ತರಲು ನಾವು ಪ್ರಯತ್ನ ಪಡುತ್ತಿದ್ದೇವೆ ಎಂದು ಮಮತಾ ಬ್ಯಾನರ್ಜಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಷ್ಟು ಹೇಳಿದ ಮೇಲೆಯೂ ನೀವು ನಿಮ್ಮ ಹಠ, ಪ್ರತಿಭಟನೆಯನ್ನು ಮುಂದುವರಿಸುತ್ತೀರಿ ಎಂದಾದರೆ ನನ್ನ ತಲೆ ಕಡಿಯಿರಿ ಎಂದು ತಮ್ಮ ಅಸಹನೆಯನ್ನು ಹೊರಹಾಕಿದರು ಮಮತಾ. ನಿನ್ನೆ ಕೋಲ್ಕತ್ತಾದಲ್ಲಿ ನೂರಾರು ಮಂದಿ ಬೀದಿಗೆ ಬಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಕ್ಷಿಪ್ರವಾಗಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು.

ಆಂಫಾನ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಬೆಳೆಹಾನಿ ಸೇರಿ 1 ಲಕ್ಷ ಕೋಟಿ ರೂಪಾಯಿ ಹಾನಿಯುಂಟಾಗಿದೆ ಎಂದು ಅಂದಾಜಿಸಲಾಗಿದೆ.

SCROLL FOR NEXT