ಮಧುರೈ: ಮೂವರು ದುಷ್ಕರ್ಮಿಗಳ ತಂಡ ಹಾಡುಹಗಲೇ ಯುವಕನೋರ್ವನ ಕತ್ತು ಕಡಿದು ಚರ್ಚ್ ಬಾಗಿಲಲ್ಲಿ ಇಟ್ಟು ಪರಾರಿಯಾಗಿದ್ದಾರೆ.
ಮಧುರೈನ ಸೇಂಟ್ ಮೇರೀಸ್ ಚರ್ಚ್ ಬಳಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಯುವಕನನ್ನು 22 ವರ್ಷದ ಮುರುಘನಾಥಂ ಎಂದು ಗುರುತಿಸಲಾಗಿದೆ.
ಸ್ನೇಹಿತ ಮುನಿಸ್ವಾಮಿ ಜೊತೆ ಮುರುಘನಾಥಂ ನಡೆದುಕೊಂಡು ಬರುತ್ತಿದ್ದಾಗ ಕಾರಿನಲ್ಲಿ ಬಂದು ಅಡ್ಡಗಟ್ಟಿದ ದುಷ್ಕರ್ಮಿಗಳು ಮುರುಘನಾಥಂ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಈ ವೇಳೆ ಮುನಿಸ್ವಾಮಿ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾನೆ.
ನಂತರ ಪೊಲೀಸರಿಗೆ ಮುನಿಸ್ವಾಮಿ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಯುವಕನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮುರುಘನಾಥಂ ಮೃತಪಟ್ಟ ನಂತರ ದುಷ್ಕರ್ಮಿಗಳು ಆತನ ತಲೆಯನ್ನು ಕಡಿದು ಹಾಕಿದ್ದಾರೆ. ಇದನ್ನು ಸ್ಥಳೀಯರೋರ್ವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.