ದೇಶ

ಹತ್ರಾಸ್'ನಲ್ಲಿ ಗಲಭೆ ಸೃಷ್ಟಿಸಲು ಯತ್ನ: ಪಿಎಫ್ಐ ನಂಟು ಶಂಕೆ, ನಾಲ್ವರ ಬಂಧನ

Manjula VN

ಹತ್ರಾಸ್: ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ತಮ್ಮ ಲಾಭಕ್ಕೆ ಬಳಸಿಕೊಂಡು, ಗಲಭೆ ಸೃಷ್ಟಿಸಲು ಯತ್ನ ನಡೆಸುತ್ತಿದ್ದ ನಾಲ್ವರನ್ನು ಉತ್ತರಪ್ರದೇಶ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ. 

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಹತ್ರಾಸ್ ನ 19 ವರ್ಷದ ಯುವತಿ ಕಳೆದ ವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆ ನಂತರ ಪ್ರಕರಣಕ್ಕೆ ಜಾತಿಯ ಬಣ್ಣ ಬಳಿದು ಸಂಘರ್ಷ ಹುಟ್ಟುಹಾಕುವ ಯತ್ನಗಳು ನಡೆದಿತ್ತು. ಘಟನೆ ಬಳಿಕ ಹಲವಾರು ರಾಜಕೀಯ ನಾಯಕರು, ವಿವಿಧ ಸಂಘಟನೆಗಳ ಮುಖಂಡರು ಪ್ರತೀನಿತ್ಯ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಲೇ ಇದ್ದಾರೆ. 

ಈ ನಡುವೆಯೇ ಕೆಲವು ಕಿಡಿಗೇಡಿಗಳು ಜಾತಿ-ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸುವ ಯತ್ನ ನಡೆಸುತ್ತಿವೆ. ಹೀಗಾಗಿ ಉತ್ತರಪ್ರದೇಶ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ಓಡಾಡ ಹಾಗೂ ವಾಹನಗಳ ಮೇಲೆ ನಿಗಾ ಇರಿಸಿದ್ದಾರೆ. 

ಇದರಂತೆ ಇಂದು ಹತ್ರಾಸ್ ನಲ್ಲಿ ಗಲಭೆ ಸೃಷ್ಟಿಸಲು ಕೆಲವರು ಸಂಚು ರೂಪಿಸಿದ್ದಾರೆಂಬ ಮಾಹಿತಿ ತಿಳಿದುಬಂದ ಹಿನ್ನಲೆಯಲ್ಲಿ ಮಥುರಾ ಮಠ ಟೋಲ್ ಪ್ಲಾಜಾ ಬಳಿ ವಾಹನಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪಿಎಫ್ಐ ನಂಟು ಹೊಂದಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧನಕ್ಕೊಳಪಡಿಸಿದ್ದಾರೆ. 

ಬಂಧಿತರನ್ನು ಮುಜಫರ್ನಗರದ ಅತೀಕ್-ಉರ್ ರೆಹಮಾನ್, ಮಲಪ್ಪುರಂನ ಸಿದ್ದೀಕ್, ಬಹ್ರೇಚ್ ನ ಮಸೂದ್ ಅಹ್ಮದ್ ಮತ್ತು ರಾಂಪುರದ ಆಲಂ ಎಂದು ಗುರ್ತಿಸಲಾಗಿದೆ. 

ಬಂಧಿತರು ಶಾಂತಿ ಹಾಗೂ ಸುವ್ಯವಸ್ಥೆ ನಾಶಪಡಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಬಂಧಿತರ ಬಳಿಯಿದ್ದ ಮೊಬೈಲ್ ಫೋನ್, ಲ್ಯಾಪ್ ಟಾಪ್ ಸೇರಿದಂತೆ ಕೆಲ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇನ್ನು ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಇವರಿಗೆ ಪಿಎಫ್ಐ, ಸಿಎಫ್ಐ ಜೊತೆಗೆ ನಂಟು ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. 

SCROLL FOR NEXT