ದೇಶ

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ 7 ದಿನ ಇಡಿ ವಶಕ್ಕೆ

Sumana Upadhyaya

ಕೊಚ್ಚಿ: ಕೇರಳ ರಾಜಕೀಯ ವಲಯವನ್ನು ತಲ್ಲಣಗೊಳಿಸಿದ ಚಿನ್ನದ ಕಳ್ಳಸಾಗಣೆ ಕೇಸಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪ್ರಮುಖ ಆರೋಪಿ ಎಂ ಶಿವಶಂಕರ್ ಅವರನ್ನು 7 ದಿನಗಳ ಕಾಲ ಕಸ್ಟಡಿಗೊಪ್ಪಿಸಲಾಗಿದೆ.

ಅವರನ್ನು ಇಂದು ಬೆಳಗ್ಗೆ 11 ಗಂಟೆಗೆ ಕೊಚ್ಚಿಯಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಕೇಸಿನಡಿ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಅವರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲಾಯಿತು, ಅದರಲ್ಲಿ ನೆಗೆಟಿವ್ ಬಂದಿದ್ದು ನಂತರ ಜಾರಿ ನಿರ್ದೇಶನಾಲಯಕ್ಕೆ ಏಳು ದಿನಗಳ ಕಸ್ಟಡಿಗೊಪ್ಪಿಸಲಾಯಿತು.

ಬಂಧನದ ಆದೇಶ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು, ಅದರಲ್ಲಿ ಜಾರಿ ನಿರ್ದೇಶನಾಲಯ, ಕಳೆದ ಅಕ್ಟೋಬರ್ 15ರಂದು ನೀಡಿದ್ದ ಹೇಳಿಕೆಯಲ್ಲಿ, ಸ್ವಪ್ನ ಸುರೇಶ್ ಅವರಿಗೆ ಸಹಾಯವಾಗುವಂತೆ ನೀವು ಕಸ್ಟಮ್ಸ್ ಇಲಾಖೆಯ ಹಿರಿಯ ಅಧಿಕಾರಿ ಬಳಿ ಮಾತನಾಡಿದ್ದಿರಿ. ಅಂದರೆ ಸ್ವಪ್ನ ಸುರೇಶ್ ಅವರ ಅಪರಾಧ ಕೃತ್ಯಗಳಲ್ಲಿ ನೀವು ಕೂಡ ಭಾಗಿಯಾಗಿದ್ದಿರಿ ಇಂದು ಸ್ಪಷ್ಟವಾಗಿ ಇದರಲ್ಲಿ ಗೊತ್ತಾಗುತ್ತದೆ. ಸಾರ್ವಜನಿಕ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೆ ಸರ್ಕಾರದ ಇತರ ಇಲಾಖೆಗಳ ಕೆಲಸಗಳಲ್ಲಿ ನೀವು ಮಧ್ಯ ಪ್ರವೇಶಿಸಿದ್ದು ಸಹ ಇದರಲ್ಲಿ ದಟ್ಟವಾಗಿ ಕಾಣುತ್ತದೆ ಎಂದು ಹೇಳಿದೆ.

ಜಾರಿ ನಿರ್ದೇಶನಾಲಯ ಪ್ರಕಾರ ಶಿವಶಂಕರ್ ಅವರು ಇದರಲ್ಲಿ ಭಾಗಿಯಾಗಿದ್ದರಿಂದ 2019 ಮತ್ತು ಈ ವರ್ಷ 21 ಬಾರಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಸಹಾಯವಾಗಿದೆ.

ಕೇರಳ ಸರ್ಕಾರದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರ ಅಧಿಕಾರಾವಧಿಯಲ್ಲಿ ಸ್ವಪ್ನ ಸುರೇಶ್ ಅವರು ಚಿನ್ನ ಕಳ್ಳಸಾಗಣೆ ಮಾಡಿದ್ದು ಅದಕ್ಕೆ ಕಸ್ಟಮ್ಸ್ ಇಲಾಖೆಯನ್ನು ಸಂಪರ್ಕಿಸಿ ಸಾಗಿಸಲು ಶಿವಶಂಕರ್ ಸಹಾಯ ಮಾಡಿದ್ದರು ಎಂಬ ಆರೋಪವಿದೆ. ಚಿನ್ನವನ್ನು ಕಳೆದ ಜುಲೈ 5ರಂದು ಈ ರೀತಿ ಅಕ್ರಮವಾಗಿ ಸಾಗಣೆ ಮಾಡುವಾಗ ವಶಪಡಿಸಿಕೊಳ್ಳಲಾಗಿತ್ತು.

SCROLL FOR NEXT