ದೇಶ

ಭಗತ್ ಸಿಂಗ್ 113ನೇ ಜಯಂತಿ: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸ್ಮರಣೆ

Sumana Upadhyaya

ನವದೆಹಲಿ: ಸೆಪ್ಟೆಂಬರ್ 28, ಭಾರತದ ಸಾಮಾಜಿಕ ಕ್ರಾಂತಿಕಾರಿ ನಾಯಕ, ಬ್ರಿಟಿಷರ ವಿರುದ್ಧ ಧೈರ್ಯದಿಂದ ಎದೆಗುಂದದೆ ಹೋರಾಡಿ ವೀರಮರಣವನ್ನು ಕಂಡು 23ನೇ ವಯಸ್ಸಿನಲ್ಲಿಯೇ ಬ್ರಿಟಿಷರಿಂದ ನೇಣಿಗೆ ಶರಣಾದ ಧೀಮಂತ ಶಹೀದ್ ಭಗತ್ ಸಿಂಗ್ ಅವರ 113ನೇ ಜಯಂತಿ.

ಈ ಸಂದರ್ಭದಲ್ಲಿ ದೇಶದ ಜನನಾಯಕರು ಅವರನ್ನು ಸ್ಮರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತ ಮಾತೆಯ ಪುತ್ರನಿಗೆ ಕೋಟಿ ಕೋಟಿ ನಮನಗಳು ಎಂದಿದ್ದಾರೆ.

ಗೃಹ ಸಚಿವ ಅಮಿತ್ ಶಾ, ಭಾರತೀಯರಿಗೆ ಯಾವತ್ತಿಗೂ ಭಗತ್ ಸಿಂಗ್ ಒಬ್ಬ ಸ್ಫೂರ್ತಿಯ ಸೆಲೆ. ತಮ್ಮ ಕ್ರಾಂತಿಕಾರಿ ವಿಚಾರಧಾರೆಗಳು, ತ್ಯಾಗ ಮನೋಭಾವ ಮತ್ತು ದೇಶದ ಯುವಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದವರು. ಅವರು ಎಂದೆಂದಿಗೂ ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡು ಸ್ಪೂರ್ತಿಯಾಗುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಜಿಲ್ಲೆಯ ಬಾಂಗಾ ಗ್ರಾಮದಲ್ಲಿ (ಹಿಂದೆ ಇದನ್ನು ಲ್ಯಾಲ್ಲ್ ಪುರ್) ಭಗತ್ ಸಿಂಗ್ 1907ರಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕೆಂದು ಬ್ರಿಟಿಷರ ವಿರುದ್ಧ ಸೆಟೆದು ನಿಂತರು. ಸಾಕಷ್ಟು ಹೋರಾಡಿದರು, ತಮ್ಮ ಊರ ಯುವಕರನ್ನು ಒಗ್ಗೂಡಿಸಿದರು.

ಲಾಹೋರ್ ಜೈಲಿನಲ್ಲಿ ಶಿವರಾಮ್ ಹರಿ ರಾಜ್ ಗುರು ಮತ್ತು ಸುಖ್ ದೇವ್ ತಾಪಾರ್ ಜೊತೆಗೆ ಭಗತ್ ಸಿಂಗ್ ಅವರನ್ನು ಮಾರ್ಚ್ 23,1931ರಂದು ಬ್ರಿಟಿಷರು ನೇಣಿಗೆ ಹಾಕಿದರು.

SCROLL FOR NEXT