ದೇಶ

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಎನ್ ಕೌಂಟರ್: ಮೂರು ಉಗ್ರರ ಹತ್ಯೆ

Sumana Upadhyaya

ಶ್ರೀನಗರ(ಜಮ್ಮು-ಕಾಶ್ಮೀರ): ಜೈಶ್ ಇ ಮೊಹಮ್ಮದ್(JeM) ಭಯೋತ್ಪಾದಕ ಸಂಘಟನೆಗೆ ಸೇರಿದ ಓರ್ವ ಉಗ್ರ ಸೇರಿದಂತೆ ಮೂವರು ಉಗ್ರರು ಶ್ರೀನಗರದ ಪಂತ ಚೌಕ್ ಪ್ರದೇಶದಲ್ಲಿ ಕಳೆದ ತಡರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಹತರಾಗಿದ್ದಾರೆ. ಈ ಉಗ್ರರು ಜೆವನ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಹತ್ಯೆಗೀಡಾದ ಓರ್ವ ಉಗ್ರನನ್ನು ಸುಹೈಲ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದ್ದು ಈತ ಜೈಶ್ ಇ ಮೊಹಮ್ಮದ್ ಸಂಘಟನೆಗೆ ಸೇರಿದವನಾಗಿದ್ದಾನೆ. ಮೂವರು ಉಗ್ರರೂ ಜೆವನ್ ಉಗ್ರ ದಾಳಿಯಲ್ಲಿ ಭಾಗಿಯಾಗಿದ್ದರು. ಇವರೆಲ್ಲರನ್ನೂ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಎನ್ ಕೌಂಟರ್ ನಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಮತ್ತು ಓರ್ವ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಜಮ್ಮು-ಕಾಶ್ಮೀರದ ಗಡಿಭಾಗದಲ್ಲಿ ಉಗ್ರರ ಒಳನುಸುಳುವಿಕೆ ಈ ವರ್ಷ ಕಡಿಮೆಯಾಗಿದೆ. ಭಯೋತ್ಪಾದಕ ಸಂಘಟನೆಗಳು 15ರಿಂದ 16 ವರ್ಷದ ವಯಸ್ಸಿನ ಮಕ್ಕಳನ್ನು ತಮ್ಮ ಗುಂಪಿಗೆ ನೇಮಕ ಮಾಡಲು ಪ್ರಯತ್ನ ಮಾಡುತ್ತಿವೆ ಎಂದು 15 ಕಾರ್ಪ್ಸ್ ನ ಜನರಲ್ ಕಮಾಂಡಿಂಗ್ ಆಫೀಸರ್(GOC) ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಕ್ರಿಯ ಭಯೋತ್ಪಾದಕ ಸಂಖ್ಯೆ ಕಣಿವೆ ಪ್ರದೇಶದಲ್ಲಿ 200ಕ್ಕೆ ಇಳಿದಿದ್ದು, ಸಕ್ರಿಯ ಸ್ಥಳೀಯ ಉಗ್ರರ ಸಂಖ್ಯೆ 100ಕ್ಕಿಂತ ಕಡಿಮೆಯಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

36 ಗಂಟೆಗಳಲ್ಲಿ 9 ಉಗ್ರರ ಹತ್ಯೆ: ವರ್ಷಾಂತ್ಯಕ್ಕೆ ಉಗ್ರಗಾಮಿಗಳ ವಿರುದ್ಧ ನಡೆಸಿದ ಎನ್ ಕೌಂಟರ್ ನಲ್ಲಿ ಸೇನೆ ಸಫಲವಾಗಿದ್ದು, ನಿನ್ನೆ ನಸುಕಿನ ಜಾವದಿಂದ ತಡರಾತ್ರಿಯವರೆಗೆ ನಡೆದ ಎನ್ ಕೌಂಟರ್ ನಲ್ಲಿ 9 ಉಗ್ರರು ಹತ್ಯೆಗೀಡಾಗಿದ್ದಾರೆ. 

SCROLL FOR NEXT