ದೇಶ

ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಹೆಚ್ಚಿನ ರೈತರನ್ನು ನೋಂದಾಯಿಸಲು ವಿಶೇಷ ಅಭಿಯಾನಕ್ಕೆ ಸರ್ಕಾರ ಚಾಲನೆ

Nagaraja AB

ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಹೆಚ್ಚಿನ ಬೆಳೆಗಾರರನ್ನು ನೋಂದಾಯಿಸಲು ವಿಶೇಷ ಅಭಿಯಾನವೊಂದನ್ನು ಕೇಂದ್ರ ಸರ್ಕಾರ ಗುರುವಾರ ಚಾಲನೆ ನೀಡಿದೆ.

ಇಂದಿನಿಂದ ಆರಂಭವಾಗಿರುವ ಒಂದು ವಾರದ ಅಭಿಯಾನ  ಖಾರಿಫ್ 2021 ಋತುವಿನಡಿ  ಎಲ್ಲಾ ಅಧಿಸೂಚಿತ ಪ್ರದೇಶಗಳನ್ನು ಒಳಗೊಂಡಿದೆ. ಬೆಳೆ ವಿಮೆ ನೋಂದಣಿ  ಕಡಿಮೆ ಇರುವ 75 ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮೇಲೆ ವಿಶೇಷ ಗಮನಹರಿಸಿದೆ. ಜನವರಿ 13, 2016 ರಂದು ಪ್ರಾರಂಭಿಸಲಾದ ಪಿಎಂಎಫ್‌ಬಿವೈ, ದೇಶಾದ್ಯಂತ ಕಡಿಮೆ ಏಕರೂಪದ ಪ್ರೀಮಿಯಂನಲ್ಲಿ ರೈತರಿಗೆ ಸಮಗ್ರ ವಿಪತ್ತು ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ  ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಈವರೆಗೂ 29.16 ಕೋಟಿ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ತಮ್ಮ ಬೆಳೆಗೆ ವಿಮೆ ಹೊಂದಿದ್ದಾರೆ ಎಂದು ತಿಳಿಸಿದರು. ಈ ಯೋಜನೆ ಪ್ರಾರಂಭವಾದಾಗಿನಿಂದಲೂ ಒಟ್ಟಾರೇ 17 ಸಾವಿರ ಕೋಟಿ ಪ್ರಿಮಿಯಂಗೆ 95 ಸಾವಿರ ಕೋಟಿ ಗೂ ಹೆಚ್ಚು ಮೊತ್ತದ ವಿಮೆಯನ್ನು ರೈತರಿಗೆ ಪಾವತಿಸಲಾಗಿದೆ ಎಂದು ಅವರು ಹೇಳಿದರು.

ಆದಾಗ್ಯೂ, ಈ ಯೋಜನೆಯನ್ನು ದೇಶದಲ್ಲಿ ವಿಸ್ತರಿಸುವ ಅಗತ್ಯವಿದೆ. ಆದ್ದರಿಂದ ಬೆಳೆ ವಿಮೆ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಮತ್ತು ಹೆಚ್ಚಿನ ರೈತರು ಪ್ರಯೋಜನ ಪಡೆಯುವಂತಾಗಿದೆ ಎಂದು ಸಚಿವರು ಹೇಳಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಗುರುತಿಸಲಾದ 75 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ರೈತರನ್ನು ತಲುಪಲು ರಾಜ್ಯ ಸರ್ಕಾರ ಮತ್ತು ಬ್ಯಾಂಕ್, ವಿಮಾ ಕಂಪನಿಗಳು ಒಂದುಗೂಡಿ ಕಾರ್ಯನಿರ್ವಹಿಸಬೇಕು ಎಂದು ತೋಮರ್ ಒತ್ತಾಯಿಸಿದರು. ಬೆಳೆ ವಿಮೆ ಯೋಜನೆ ಲಾಭ ಪಡೆಯಲು ರೈತರು ಮುಂದಾಗಬೇಕು ಮತ್ತು ಈ ಸಂಕಷ್ಟದ ಸಂದರ್ಭದಲ್ಲಿ ಸ್ವಾವಲಂಬಿಯಾಗಬೇಕು ಎಂದು ಅವರು ಹೇಳಿದ್ದಾರೆ.

SCROLL FOR NEXT