ನವದೆಹಲಿ: ರಫೇಲ್ ಒಪ್ಪಂದ ಕುರಿತು ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೇಕೆ ಮೋದಿ ಸರ್ಕಾರ ಸಿದ್ಧವಿಲ್ಲ? ಎಂದು ಭಾನುವಾರ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಸಂಸದೀಯ ಸಮಿತಿ ತನಿಖೆಗೇಕೆ ಮೋದಿ ಸರ್ಕಾರ ಸಿದ್ಧವಿಲ್ಲ? ಎಂದು ಪ್ರಶ್ನಿಸಿ ಆನ್'ಲೈನ್ ಸಮೀಕ್ಷೆಯೊಂದನ್ನು ಆರಂಭಿಸಿದ್ದಾರೆ.
ಈ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ರಾಹುಲ್ ಗಾಂಧಿಯವರು ನೀಡಿದ್ದಾರೆ. ಅಪರಾಧ ಭಾವನೆ, ಸ್ನೇಹಿತರನ್ನು ಉಳಿಸುವುದು, ಜಂಟಿ ಸಂಸದೀಯ ಸಮಿತಿಯು ರಾಜ್ಯಸಭಾ ಸ್ಥಾನವನ್ನು ಬಯಸುವುದಿಲ್ಲ, ಮೇಲಿನ ಎಲ್ಲಾ ಎಂಬ ಆಯ್ಕೆಯನ್ನು ನೀಡಿದ್ದಾರೆ.
ರಫೇಲ್ ಡೀಲ್ ಸಂಬಂಧ ಫ್ರಾನ್ಸ್ ನಲ್ಲಿ ತನಿಖೆಗೆ ಆದೇಶಿಸಲಾಗಿದೆ. ಇದರ ಬೆನ್ನಲ್ಲೇ ದೇಶದ ರಾಜಕೀಯದಲ್ಲಿ ಸಂಚಲನ ಉಂಟಾಗುತ್ತಿದೆ. ಫ್ರಾನ್ಸ್ ನಲ್ಲಿ ತನಿಖೆಗೆ ಆದೇಶವಾಗುತ್ತಲೇ, ಭಾರತದಲ್ಲಿಯೂ ರಫೇಲ್ ಡೀಲ್ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ಮಾಡಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ ಮಾತನಾಡಿ, ಫ್ರಾನ್ಸ್ ನಲ್ಲಿ ರಫೇಲ್ ಡೀಲ್ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿರೋದನ್ನು ಗಮನಿಸಿದರೆ ರಾಹುಲ್ ಗಾಂಧಿ ಆರೋಪಗಳು ಸತ್ಯ ಎನ್ನುವುದು ತಿಳಿಯುತ್ತಿದೆ. ಫ್ರಾನ್ಸ್ ಸರ್ಕಾರದ ಹಾಗೆ ನಮ್ಮಲ್ಲಿಯೂ ಜಂಟಿ ಸಂಸದೀಯ ಸಮಿತಿ ನೇತೃತ್ವದಲ್ಲಿ ರಫೇಲ್ ಡೀಲ್ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಇದೊಂದು ದೊಡ್ಡ ಭ್ರಷ್ಟಾಚಾರ, ದೇಶದ್ರೋಹ ಮತ್ತು ದೇಶದ ಬೊಕ್ಕಸದ ನಷ್ಟ ರಫೇಲ್ ಹಗರಣದಲ್ಲಿ ಅಡಗಿದೆ. ರಫೇಲ್ ಹಗರಣದ ಭೀಕರ ಸತ್ಯ ಕೊನೆಗೂ ಅನಾವರಣಗೊಂಡಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಸರಿ ಎಂಬುವುದು ಸಾಬೀತಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದರು.
ನಿನ್ನೆ ಕೂಡ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿಯವರು, ಕಳ್ಳನ ದಾಡಿ ಎಂದು ಹೇಳಿದ್ದರು.