ದೇಶ

ಪೆಗಾಸಸ್ ವಿವಾದ: ಲೋಕಸಭೆಯಲ್ಲಿ ತೀವ್ರ ಗದ್ದಲ, ಜುಲೈ 26ಕ್ಕೆ ಕಲಾಪ ಮುಂದೂಡಿಕೆ

Manjula VN

ನವದೆಹಲಿ: ಇಸ್ರೇಲಿ ಸಾಫ್ಟ್ ವೇರ್ ಪೆಗಾಸಸ್ ಬಳಸಿ ದೇಶದಲ್ಲಿ 400 ಮಂದಿಯ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿ ಶುಕ್ರವಾರ ಕೂಡ ಲೋಕಸಭೆಯಲ್ಲಿ ತೀವ್ರ ಗದ್ದಲವನ್ನು ಸೃಷ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಜುಲೈ.26ಕ್ಕೆ ಕಲಾಪವನ್ನು ಮುಂದೂಡಲಾಗಿದೆ. 

ಜುಲೈ 19ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, 3 ದಿನಗಳ ಅಧಿವೇಶನ ಗದ್ದಲ ಗಲಾಟೆಗೆ ಬಲಿಯಾಗಿದೆ. 

ದೇಶದಲ್ಲಿನ ಪ್ರಮುಖ ಸಮಸ್ಯೆಗಳಾದ ಇಂಧನ ಬೆಲೆ ಏರಿಕೆ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆಯ ಕೊರತೆಗಿಂತ ಪೆಗಾಸಸ್ ಬೇಹುಗಾರಿ ವಿಷಯ ಉಭಯ ಸದನಗಳಲ್ಲಿ ಸದ್ದು ಗದ್ದಲಕ್ಕೆ ಕಾರಣವಾಗಿದೆ.

ರಾಜ್ಯಸಭೆ ಕಲಾಪ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ
ಇನ್ನು ರಾಜ್ಯಸಭೆಯಲ್ಲೂ ಪೆಗಾಸಸ್ ವಿವಾದ ತೀವ್ರ ಗದ್ದಲವನ್ನು ಮೂಡಿಸಿರುವ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ. 

ಟಿಎಂಸಿ ಸಂಸದ ಸಂತನು ಸೇನ್, ಐಟಿ ಸಚಿವ ಅಶ್ವಿನಿ ವೈಷ್ಣವ್ ಕೈಯಿಂದ ಕಾಗದಗಳನ್ನು ಕಸಿದುಕೊಂಡು ಸದನದಲ್ಲಿ ಹರಿದು ಹಾಕಿದ ಘಟನೆಯನ್ನು ಟಿಎಂಸಿ ಸಂಸದ ದೆರೆಕ್ ಒಬ್ರಿಯನ್ ಅವರು ಉಲ್ಲೇಖಿಸುತ್ತಿದ್ದಂತೆ ರಾಜ್ಯಸಭೆಯಲ್ಲಿ ಗದ್ದಲ ಗಲಾಟೆ ಆರಂಭವಾಯಿತು. 

ಬಳಿಕ ಸಂತಾನು ಸೇನ್, ದಯವಿಟ್ಟು ಸದನದಿಂದ ಹೊರ ನಡೆದು, ಸುಗಮವಾಗಿ ಕಲಾಪ ನಡೆಸುವುದಕ್ಕೆ ಅವಕಾಶ ನೀಡಿ ಎಂದು ರಾಜ್ಯಸಭೆ ಸಭಾಪತಿಗಳು ಹೇಳಿದರು. ಈ ವೇಳೆ ತೀವ್ರ ಗದ್ದಲುವುಂಟಾಯಿತು. ಬಳಿಕ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿತ್ತು. 

ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ರಾಜ್ಯಸಭೆಯ ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯ ಸಂತಾನು ಸೇನ್ ರನ್ನು ಅಮಾನತುಗೊಳಿಸಿ ಆಗಸ್ಟ್ 13ರವರೆಗೂ ನಡೆಯಲಿರುವ ಮುಂಗಾರು ಅಧಿವೇಶನದಿಂದ ದೂರ ಇರುವಂತೆ ಸೂಚಿಸಿದ್ದರು. 

12 ಗಂಟೆ ನಂತರ ಆರಂಭವಾದ ಕಲಾಪದ ಸಮಯದಲ್ಲೂ ಸಂತನು ಅವರು ಸದನದಲ್ಲಿ ಹಾಜರಿದ್ದರು. ಈ ವೇಳೆ, ಉಪ ಸಭಾಪತಿ ಹರಿವಂಶ್ ಕೂಡಾ ಕಲಾಪದಿಂದ ಹೊರ ನಡೆಯುವಂತೆ ಟಿಎಂಸಿ ಸಂಸದ ಸಂತಾನು ಸೇನ್ ರಿಗೆ ಸೂಚನೆ ನೀಡಿದರು. 

ಮುಂಗಾರು ಅಧಿವೇಶನದ ಅಂತ್ಯದವರೆಗೆ ಕಲಾಪಕ್ಕೆ ಹಾಜರಾಗದಂತೆ ಅಮಾನತುಗೊಳಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಸದನದಿಂದ ಹೊರಹೋಗಲು ನಾವು ವಿನಂತಿಸುತ್ತೇವೆಂದು ಹೇಳಿದರು, ಬಳಿಕ ಗದ್ದಲ ಗಲಾಟೆ ಹೆಚ್ಚಾದ ಹಿನ್ನೆಲೆ ಮತ್ತೆ ಸದನವನ್ನು ಮುಂದೂಡಲಾಯಿತು.

ಸಂಸತ್ ಆವರಣದಲ್ಲಿ ವಿಪಕ್ಷಗಳ ಪ್ರತಿಭಟನೆ
ಈ ನಡುವೆ ಪೆಗಾಸಸ್ ವಿವಾದ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿರುವ ವಿರೋಧ ಪಕ್ಷಗಳು ಸಂಸತ್ತು ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿವೆ. 

ಕಾಂಗ್ರೆಸ್, ಡಿಎಂಕೆ, ಶಿವಸೇನೆಯ ಸಂಸದರು ಸಂಸತ್ತು ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಭಟನೆ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ. 

ಪ್ರತಿಭಟನೆ ವೇಳೆ ಮಾತನಾಡಿರುವ ಕಾಂಗ್ರೆಸ ನಾಯಕ ರಾಹುಲ್ ಗಾಂಧಿಯವರು, ಪೆಗಾಸಸ್​ ಸಾಫ್ಟ್​ವೇರ್ ಅನ್ನು ಇಸ್ರೇಲ್​ ಆಯುಧವಾಗಿ ಬಳಸಲು ತಯಾರಿಸಿದೆ. ಭಯೋತ್ಪಾದಕರ ವಿರುದ್ಧವೇ ಬಳಸಬೇಕಿದೆ. ಆದರೆ, ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಭಾರತೀಯರ ವಿರುದ್ಧ ಮತ್ತು ನಮ್ಮ ಸಂಸ್ಥೆಗಳ ವಿರುದ್ಧ ಬಳಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವೆಂಕಯ್ಯ ನಾಯ್ಡು ಭೇಟಿಯಾದ ಪಿಯೂಷ್ ಗೋಯಲ್
ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಅಶ್ಚಿನಿ ವೈಷ್ಣವ್ ಅವರೊಂದಿಗೆ ಟಿಎಂಸಿ ಸಂಸದ ಸಂತನು ಸೇನ್ ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆಯಲ್ಲಿ ಇಂದು ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ, ಸಂಸದನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. 

ಜುಲೈ 19ರಿಂದ 17ನೇ ಲೋಕಸಭೆಯ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಆಗಸ್ಟ್‌ 13ರವರೆಗೂ ನಡೆಯಲಿದೆ. 

SCROLL FOR NEXT