ನವದೆಹಲಿ: ದೇಶದಲ್ಲಿ ಕೋವಿಡ್ನ ಎರಡನೇ ಅಲೆಯು ಉತ್ತುಂಗದಲ್ಲಿದ್ದಾಗ ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕಕ್ಕೆ ದೆಹಲಿ ಸರ್ಕಾರ ಬೇಡಿಕೆ ಇಟ್ಟಿತ್ತು ಎಂದು ಸುಪ್ರೀಂ ಕೋರ್ಟ್ನ ಸಮಿತಿಯು ವರದಿ ನೀಡಿರುವ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೀವು ಚುನಾವಣಾ ರ್ಯಾಲಿ ನಡೆಸುತ್ತಿದ್ದಾಗ, ನಾನು ರಾತ್ರಿಯಿಡೀ ಸೋಂಕಿತರಿಗೆ ಆಮ್ಲಜನಕ ವ್ಯವಸ್ಥೆ ಮಾಡುತ್ತಿದ್ದೆ ಎಂದು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಕೋವಿಡ್ 2ನೇ ಅಲೆ ವೇಳೆ ದೆಹಲಿ ಸರ್ಕಾರ ಅಮ್ಲಜನಕ ಅಗತ್ಯವನ್ನು ಉತ್ಪ್ರೇಕ್ಷಿಸಿತ್ತು: ಸುಪ್ರೀಂ ಕೋರ್ಟ್ ಸಮಿತಿ ಮಾಹಿತಿ
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕೇಜ್ರಿವಾಲ್, 'ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಪ್ರೀತಿಪಾತ್ರರನ್ನು ಕಳೆದುಕೊಂಡ ಜನರನ್ನು 'ಸುಳ್ಳುಗಾರರು' ಎಂಬಂತೆ ಬಿಂಬಿಸಬಾರದು. ನನ್ನ ಅಪರಾಧವೆಂದರೆ ನಾನು ದೆಹಲಿಯ 2 ಕೋಟಿ ಜನರ ಉಸಿರಾಟಕ್ಕಾಗಿ ಹೋರಾಡಿದೆ. ನೀವು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ನಾನು ರಾತ್ರಿಯಿಡೀ ಸೋಂಕಿತರಿಗಾಗಿ ಆಮ್ಲಜನಕದ ವ್ಯವಸ್ಥೆ ಮಾಡುವ ಕೆಲಸ ಮಾಡುತ್ತಿದ್ದೆ. ಜನರಿಗೆ ಆಮ್ಲಜನಕದ ವ್ಯವಸ್ಥೆ ಮಾಡಲು ನಾನು ಹೋರಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ 2ನೇ ಅಲೆಯಲ್ಲಿ ದೆಹಲಿ ಆಮ್ಲಜನಕದ ಬೇಡಿಕೆಯನ್ನು ಅಗತ್ಯಕ್ಕಿಂತ ಹೆಚ್ಚು ಬಿಂಬಿಸಿರಲಿಲ್ಲ: ಮನೀಶ್ ಸಿಸೋಡಿಯಾ
ಅಂತೆಯೇ ಆಮ್ಲಜನಕದ ಕೊರತೆಯಿಂದ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ದಯವಿಟ್ಟು ಅವರನ್ನು ಸುಳ್ಳುಗಾರರು ಎಂದು ಕರೆಯಬೇಡಿ. ಅವರು ತುಂಬಾ ನೋವಿನಲ್ಲಿದ್ದಾರೆ. ಮುಂದಿನ ಕೋವಿಡ್ ತರಂಗದಲ್ಲಿ ಆಮ್ಲಜನಕದ ಕೊರತೆಯಿಲ್ಲ ಎಂದು ಖಚಿತಪಡಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಆದರೆ ಈಗ ನಾವೇ ಜಗಳವಾಡುತ್ತಿದ್ದರೆ ನಮ್ಮ ಹೋರಾಟದ ವಿರುದ್ಧ ವೈರಸ್ ಗೆಲ್ಲುತ್ತದೆ. ಆಮ್ಲಜನಕದ ಮೇಲಿನ ನಿಮ್ಮ ಹೋರಾಟ ಮುಗಿದಿದ್ದರೆ ನಾವು ಈಗ ಕೆಲಸ ಮಾಡಬಹುದೇ? ಎಂದು ಪ್ರಶ್ನಿಸಿರುವ ಕೇಜಿರ್ವಾಲ್ ನಾವು ಒಟ್ಟಾಗಿ ಒಂದು ವ್ಯವಸ್ಥೆಯನ್ನು ಮಾಡೋಣ ಆದರಿಂದ ಮೂರನೇ ತರಂಗದಲ್ಲಿ ಯಾರೂ ಆಮ್ಲಜನಕದ ಕೊರತೆಯನ್ನು ಎದುರಿಸುವುದಿಲ್ಲ. ಎರಡನೇ ತರಂಗದಲ್ಲಿ ಆಮ್ಲಜನಕದ ತೀವ್ರ ಕೊರತೆ ಇತ್ತು. ಅದು ಮೂರನೆಯ ತರಂಗದಲ್ಲಿ ಇರಬಾರದು. ನಾವು ಪರಸ್ಪರ ಜಗಳವಾಡಿದರೆ ಕರೋನಾ ಗೆಲ್ಲುತ್ತದೆ. ನಾವು ಒಟ್ಟಾಗಿ ಹೋರಾಡಿದರೆ ರಾಷ್ಟ್ರವು ಗೆಲ್ಲುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಏನಿದು ವಿವಾದ?
ರಾಷ್ಟ್ರ ರಾಜಧಾನಿಯಲ್ಲಿನ ಬೆಡ್ಗಳಿಗೆ ಬಳಕೆಯಾಗುವ ಆಮ್ಲಜನಕ ಸಾಮರ್ಥ್ಯವು 289 ಮೆಟ್ರಿಕ್ ಟನ್ ಇದೆ. ಆದರೆ, ಅಗತ್ಯವಿರುವುದಕ್ಕಿಂತ ನಾಲ್ಕು ಪಟ್ಟು ಅಂದರೆ 1,140 ಮೆಟ್ರಿಕ್ ಟನ್ ಆಮ್ಲಜನಕಕ್ಕೆ ದೆಹಲಿ ಸರ್ಕಾರವು ಬೇಡಿಕೆ ಇಟ್ಟಿತ್ತು ಎಂದು ಲೆಕ್ಕಪರಿಶೋಧನಾ ಸಮಿತಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿತ್ತು. ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ನೇತೃತ್ವದ ಐವರ ಸದಸ್ಯರ ಲೆಕ್ಕಪರಿಶೋಧನಾ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು. ಆಮ್ಲಜನಕ ಬೇಡಿಕೆ ವಿಚಾರದಲ್ಲಿ ದೆಹಲಿ ಸರ್ಕಾರವು 'ಉತ್ಪ್ರೇಕ್ಷೆ' ಮಾಡಿದೆ ಎಂದು ಸಮಿತಿ ಹೇಳಿದೆ.
ಅರವಿಂದ್ ಕೇಜ್ರಿವಾಲ್ ಮೇಲೆ ಮುಗಿಬಿದ್ದ ಬಿಜೆಪಿ
ಇದೇ ವೇಳೆ ಆಕ್ಸಿಜನ್ ವಿಚಾರ ಇದೀಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್ ರಾಜಕೀಯಕ್ಕಾಗಿ ಸುಳ್ಳು ಹೇಳಿದ್ದಾರೆ. ಜನರ ಜೀವನದ ವಿಷಯದಲ್ಲಿ ರಾಜಕೀಯ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಜ್ರಿವಾಲ್ ಸುಳ್ಳಿನಿಂದಾಗಿ ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಸೇರಿ 12 ರಾಜ್ಯಗಳು ಆಮ್ಲಜನಕದ ಸಮಸ್ಯೆಯನ್ನು ಅನುಭವಿಸಿದವು ಎಂದು ಕಿಡಿಕಾರಿದರು. ಆಕ್ಸಿಜನ್ ಪೂರೈಕೆ ಬಗ್ಗೆ ದಿಲ್ಲಿ ಸಿಎಂ ನೀಡಿದ ಆಡಿಟ್ ರಿಪೋರ್ಟ್ ಬಗ್ಗೆ ಕಿಡಿಕಾರಿದ ಸಂಬಿತ್ ಪಾತ್ರಾ, ಕೇಜ್ರಿವಾಲ್ ಸುಖಾಸುಮ್ಮನೇ ಹೆಚ್ಚುವರಿ ಆಕ್ಸಿಜನ್ಗೆ ಬೇಡಿಕೆ ಇಟ್ಟಿದ್ದರು. 209 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದ್ದಾಗ, 1000 ಮೆಟ್ರಿಕ್ ಟನ್ ಆಕ್ಸಿಜನ್ಗೆ ಬೇಡಿಕೆ ಇಟ್ಟಿದ್ದರು ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ.