ದೇಶ

ಮೋದಿ ಹೊಗಳಿಕೆ: ಆಜಾದ್ ಪ್ರತಿಕೃತಿ ದಹಿಸಿ ಕಾರ್ಯಕರ್ತರ ಪ್ರತಿಭಟನೆ, ಆನಂದ್ ಶರ್ಮ ವಿರುದ್ಧ ಅಧೀರ್ ವಾಗ್ದಾಳಿ

Srinivas Rao BV

ಜಮ್ಮು: ಕಾಂಗ್ರೆಸ್ ನಾಯಕ, ಜಮ್ಮು-ಕಾಶ್ಮೀರ ಮಾಜಿ ಸಿಎಂ ಗುಲಾಮ್ ನಬಿ ಆಜಾದ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಭುಗಿಲೆದ್ದಿದ್ದಾರೆ. 

ಡಿಡಿಸಿ ಸದಸ್ಯ ಹಾಗೂ ಜೆ-ಕೆ ಕಾಂಗ್ರೆಸ್ ನ ಮಾಜಿ ಪ್ರಧಾನಕಾರ್ಯದರ್ಶಿ ಶಾನವಾಜ್ ಚೌಧರಿ ನೇತೃತ್ವದಲ್ಲಿ 
ಜಮ್ಮು-ಕಾಶ್ಮೀರದ ಪ್ರೆಸ್ ಕ್ಲಬ್ ನ ಹೊರ ಭಾಗದಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮೋದಿಯನ್ನು ಹೊಗಳಿದ್ದ ಗುಲಾಂ ನಬಿ ಆಜಾದ್ ಅವರ ಪ್ರತಿಕೃತಿಯನ್ನು ದಹಿಸಿ ತಮ್ಮ ಆಕ್ರೋಶ, ಪ್ರತಿಭಟನೆಗಳನ್ನು ಹೊರಹಾಕಿದ್ದಾರೆ. 

"ಗುಲಾಂ ನಬಿ ಆಜಾದ್ ಅವರನ್ನು ದಶಕಗಳ ಕಾಲ ಬೆಳೆಸಿದ್ದು, ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ನಾಯಕತ್ವ. ಆದರೆ ಈಗ ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಆಣತಿಯಂತೆ ವರ್ತಿಸುತ್ತಿರುವ ಗುಲಾಮ್ ನಬಿ ಆಜಾದ್ ಈಗ ಪಕ್ಷ ಸಂಕಷ್ಟದಲ್ಲಿರುವಾಗ ಪಕ್ಷವನ್ನು ದುರ್ಬಲಗೂಳಿಸಲು ಯತ್ನಿಸುತ್ತಿದ್ದಾರೆ" ಎಂದು ಶಾನವಾಜ್ ಚೌಧರಿ ಆರೋಪಿಸಿದ್ದಾರೆ. 

ಕಾಂಗ್ರೆಸ್ ಪಕ್ಷ ಈಗ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ಗುಲಾಮ್ ನಬಿ ಆಜಾದ್ ರಂತಹ ನಾಯಕರ ಅನುಭವ ಪಕ್ಷಕ್ಕೆ ಬೆನ್ನೆಲುಬಾಗಬೇಕು, ಆದರೆ ವೈಯಕ್ತಿಕ ಲಾಭಕ್ಕಾಗಿ ಈಗ ಪಕ್ಷ ಸಂಕಷ್ಟದಲ್ಲಿರುವಾಗ ಪಕ್ಷವನ್ನು ದುರ್ಬಲಗೂಳಿಸಲು ಯತ್ನಿಸುತ್ತಿರುವ ಆಜಾದ್ ರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಶಾನವಾಜ್ ಚೌಧರಿ ಆಗ್ರಹಿಸಿದ್ದಾರೆ. 

ರಾಜ್ಯಸಭಾ ಸದಸ್ಯರ ಅವಧಿ ಪೂರ್ಣಗೊಳಿಸಿದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗುಲಾಮ್ ನಬಿ ಆಜಾದ್, ತಮ್ಮ ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
 
"ಪ್ರಧಾನಿ ನರೇಂದ್ರ ಮೋದಿ ತಮ್ಮನವನ್ನು ಮರೆಮಾಚುವುದಿಲ್ಲ, ಆ ರೀತಿ ಮಾಡುವವರು ನೀರಿನ ಮೇಲಿನ ಗುಳ್ಳೆಯಲ್ಲಿ ಬದುಕುತ್ತಿರುತ್ತಾರೆ. ಹಲವು ನಾಯಕರಲ್ಲಿ ಹಲವಾರು ವಿಷಯಗಳನ್ನು ನಾನು ಇಷ್ಟಪಡುತ್ತೆನೆ, ರಾಜಕೀಯವಾಗಿ ನಾನು ಅವರನ್ನು ವಿರೋಧಿಸಬಹುದು, ಆದರೆ ಮೋದಿ ಎಂದಿಗೂ ತಮ್ಮ ನೈಜತೆಯನ್ನು ಮರೆಮಾಚುವುದಿಲ್ಲ. ನಮ್ಮ ಮೂಲಗಳ ಬಗ್ಗೆ ನಾವೆಂದಿಗೂ ಹೆಮ್ಮೆಯಿಂದ ಇರಬೇಕು" ಎಂದು ಆಜಾದ್ ಹೇಳಿಕೆ ನೀಡಿದ್ದರು. 

ಕಳೆದ ವರ್ಷ ಕಾಂಗ್ರೆಸ್ ನಲ್ಲಿ ಗಾಂಧಿ ಪರಿವಾರದ ನಾಯಕತ್ವವನ್ನು ಪ್ರಶ್ನಿಸಿದ್ದ 23 ನಾಯಕರ ಪೈಕಿ ಕೆಲವರು 
ಆಜಾದ್ ಮಾತನಾಡಿದ್ದ ಸಭೆಯಲ್ಲಿ ಭಾಗಿಯಾಗಿದ್ದರು.
 
ಬಂಗಾಳದಲ್ಲಿ ಐಎಸ್ ಎಫ್ ನೊಂದಿಗೆ ಕಾಂಗ್ರೆಸ್ ಮೈತ್ರಿಗೆ ಆನಂದ್ ಶರ್ಮ ವಿರೋಧ! 

ಇತ್ತ ಕಾಂಗ್ರೆಸ್ ನ ಸಂಸದೀಯ ನಾಯಕ ಅಧೀರ್ ರಂಜನ್ ಚೌಧರಿ ಪಕ್ಷದ ಸಹೋದ್ಯೋಗಿ ಆನಂದ್ ಶರ್ಮ ವಿರುದ್ಧ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಎದುರಿಸಲು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ನೊಂದಿಗೆ ಕಾಂಗ್ರೆಸ್ ಕೈ ಜೋಡಿಸಿರುವುದಕ್ಕೆ ಆನಂದ್ ಶರ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನ ಈ ನಡೆ ಗಾಂಧಿ ಹಾಗೂ ನೆಹರು ಜಾತ್ಯಾತೀತತೆಗೆ ವಿರುದ್ಧವಾಗಿದೆ. ಕೋಮುಶಕ್ತಿಗಳನ್ನು ಎದುರಿಸುವುದರಲ್ಲಿ ಕಾಂಗ್ರೆಸ್  ತಾರತಮ್ಯ ಮಾಡುವಂತಿಲ್ಲ ಎಂದು ಆನಂದ್ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದ್ದರು. 

ಇದಕ್ಕೆ ಪ್ರತಿಯಾಗಿ ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಚೌಧರಿ, "ಆನಂದ್ ಶರ್ಮಾ ಅವರೇ, ವಾಸ್ತವಾಂಶ ಅರಿತುಕೊಳ್ಳಿ, ಪಶ್ಚಿಮ ಬಂಗಾಳದಲ್ಲಿ ಜಾತ್ಯಾತೀತತೆಯ ಮೈತ್ರಿಯನ್ನು ಮುನ್ನಡೆಸುತ್ತಿರುವುದು ಸಿಪಿಐ(ಎಂ) ಇದರಲ್ಲಿ ಕಾಂಗ್ರೆಸ್ ಅವಿಭಾಜ್ಯ ಅಂಗವಾಗಿದೆ. ಬಿಜೆಪಿಯ ಕೋಮುವಾದಿ ವಿಭಜಕ ರಾಜಕೀಯವನ್ನು ಮಣಿಸಲು ನಾವು ನಿರ್ಧರಿಸಿದ್ದೇವೆ" ಎಂದು ಹೇಳಿದ್ದಾರೆ. 

"ಐಎಸ್ಎಫ್ ಸಮಾವೇಶದಲ್ಲಿ ಅಧೀರ್ ರಂಜನ್ ಚೌಧರಿ ಭಾಗಿಯಾಗಿದ್ದು, ನೋವಿನ ಹಾಗೂ ನಾಚಿಕೆಗೇಡಿನ ಸಂಗತಿ" ಎಂದು ಆನಂದ್ ಶರ್ಮ ಹೇಳಿದ್ದರು. 

SCROLL FOR NEXT