ದೇಶ

ಕೇರಳ ಸಂಪುಟ ವಿಸ್ತರಣೆ: ಪಿಣರಾಯಿ ಬಳಿ ಗೃಹ, ಅಳಿಯನಿಗೆ ಲೋಕೋಪಯೋಗಿ, ವೀಣಾ ಜಾರ್ಜ್ ಗೆ ಆರೋಗ್ಯ ಖಾತೆ

Shilpa D

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಖಾತೆ ಹಂಚಿಕೆ  ಮಾಡಿದ್ದು 20 ಸಚಿವರಿಗೆ ಹೊಣೆಗಾರಿಕೆ ನೀಡಿದ್ದಾರೆ.

ಗೃಹ ಹಾಗೂ ಐಟಿ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿರುವ ಪಿಣರಾಯಿ ವಿಜಯನ್ ಮೊದಲ ಬಾರಿಗೆ ಸಚಿವರಾಗಿರುವ ಅವರ ಅಳಿಯ ಪಿ.ಎ. ಮೊಹಮ್ಮದ್‌ ರಿಯಾಸ್‌ಗೆ ಲೋಕೋಪಯೋಗಿ ಹಾಗೂ ಕೆಕೆ ಶೈಲಜಾ ಅವರ ಬಳಿಯಿದ್ದ ಆರೋಗ್ಯ ಖಾತೆಯನ್ನು ವೀಣಾ ಜಾರ್ಜ್‌ ಅವರಿಗೆ ನೀಡಿದ್ದಾರೆ.

ಎಂ.ವಿ.ಗೋವಿಂದನ್‌ ಅವರಿಗೆ ಸ್ಥಳೀಯ ಸಂಸ್ಥೆಗಳು ಹಾಗೂ ಅಬಕಾರಿ, ಆರ್‌.ಬಿಂದು ಅವರಿಗೆ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ, ಜೆ.ಚಿಂಚುರಾಣಿ ಅವರಿಗೆ ಪಶು ಸಂಗೋಪನೆ ಹಾಗೂ ಡೇರಿ ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ. 

ಐದು ಬಾರಿ ಶಾಸಕ ಹಾಗೂ ಮಾಜಿ ಸ್ಪೀಕರ್‌ ಕೆ.ರಾಧಾಕೃಷ್ಣನ್ ಅವರಿಗೆ ಮಹತ್ವದ ಬೆಳವಣಿಗೆಯಲ್ಲಿ ದೇವಸ್ವಂ ಖಾತೆ ನೀಡಲಾಗಿದೆ. ಇವರು ವಿಜಯನ್‌ ನೇತೃತ್ವದ ಸಂಪುಟದಲ್ಲಿನ ಪರಿಶಿಷ್ಟ ಜನಾಂಗದ ಮುಖ. ಸರಳ ಹಾಗೂ ಭ್ರಷ್ಟಾಚಾರದ ಕಳಂಕ ರಹಿತರು ಎಂಬ ಖ್ಯಾತಿ ರಾಧಾಕೃಷ್ಣನ್‌ ಅವರದು. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಸೇರಿದಂತೆ ರಾಜ್ಯದಲ್ಲಿರುವ ನೂರಾರು ದೇವಸ್ಥಾನಗಳ ನಿರ್ವಹಣೆಯ ಸವಾಲು ಅವರ ಮುಂದಿದೆ. ಕೆ.ರಾಜನ್ ಅವರಿಗೆ ಕಂದಾಯ ಖಾತೆ ನೀಡಲಾಗಿದೆ,ಪಿ ರಾಜೀವ್ ಅವರಿಗೆ
ಕಾನೂನು ಇಲಾಖೆ ಸೇರಿದಂತೆ 20 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

21 ಸಚಿವರನ್ನು ಒಳಗೊಂಡ ಸಂಪುಟದಲ್ಲಿ 17 ಸಚಿವರು ಹೊಸಬರೇ ಆಗಿರುವುದು ವಿಶೇಷ. ಸಿಪಿಐನ ನಾಲ್ವರು, ಕೇರಳ ಕಾಂಗ್ರೆಸ್‌ (ಎಂ), ಜೆಡಿಎಸ್‌ ಹಾಗೂ ಎನ್‌ಸಿಪಿಯ ತಲಾ ಒಬ್ಬರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

SCROLL FOR NEXT