ದೇಶ

'ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ, ಸಂವಿಧಾನ ದಿನ ಪಕ್ಷದ ಕಾರ್ಯಕ್ರಮವಲ್ಲ': ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: 1950ರ ನಂತರ ಪ್ರತಿವರ್ಷ ಸಂವಿಧಾನ ದಿನವನ್ನು ಆಚರಿಸಿ ಸಂವಿಧಾನ ರಚನೆಯಲ್ಲಿ ಏನೇನಾಗಿತ್ತು, ಅದರ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಾಗಿತ್ತು. ಆದರೆ ಕೆಲವರು ಹಾಗೆ ಮಾಡಲಿಲ್ಲ. ನಾವು ಮಾಡುತ್ತಿರುವ ಕೆಲಸ ಸರಿಯೇ, ತಪ್ಪೇ ಎಂದು ಮೌಲ್ಯಮಾಪನ ಮಾಡಲು ಸಹ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ 71ನೇ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಿವಿಧತೆಯಲ್ಲಿ ಏಕತೆ, ವೈವಿಧ್ಯತೆಯ ದೇಶವಾದ ಭಾರತದ ಸೊಬಗನ್ನು ನಮ್ಮ ಸಂವಿಧಾನ ವಿವರಿಸುತ್ತದೆ. ಹಲವು ಅಡೆತಡೆಗಳನ್ನು ನಿವಾರಿಸಿ ಸಂವಿಧಾನವನ್ನು ರಚಿಸಿಲಾಗಿದೆ. ದೇಶಕ್ಕೆ ಸಂವಿಧಾನವನ್ನು ನೀಡಲು ಹಲವು ನಾಯಕರು ಶ್ರಮಿಸಿದ್ದಾರೆ, ಅವರಿಗೆ ಇಂದು ಗೌರವ ವಂದನೆ ಸಲ್ಲಿಸುವ ದಿನವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹಾತ್ಮಾ ಗಾಂಧಿ ಸೇರಿದಂತೆ ಹಲವು ನಾಯಕರು, ಸ್ವಾತಂತ್ರ್ಯ ಹೋರಾಟಗಾರರನ್ನು ಸಹ ಈ ಸಂದರ್ಭದಲ್ಲಿ ನಾವು ಸ್ಮರಿಸುತ್ತೇವೆ ಎಂದರು.

ನಮ್ಮ ಸರ್ಕಾರ ಬಂದ ಮೇಲೆ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಮ್ಮ ಕರ್ತವ್ಯ, ಜವಾಬ್ದಾರಿಗಳೇನು ಎಂದು ತಿಳಿದುಕೊಂಡು ಅದರತ್ತ ಹೆಜ್ಜೆಯಿಡಬೇಕು, ಆಗ ನಮ್ಮ ಹಕ್ಕುಗಳನ್ನು ರಕ್ಷಿಸಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ನಮ್ಮ ದೇಶದಲ್ಲಿ ಕೆಲವು ರಾಜಕೀಯ ಪಕ್ಷಗಳು ಕುಟುಂಬದ ಒಳಿತಿಗಾಗಿ, ಕುಟುಂಬದಿಂದಲೇ ನಡೆಯುತ್ತಿರುವ ಪಕ್ಷಗಳಾಗಿವೆ. ವಂಶ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಹೇಳಿದ್ದಾರೆ. 

ಕುಟುಂಬಕ್ಕಾಗಿ, ಕುಟುಂಬದಿಂದ ಇರುವ ಪಕ್ಷ ... ಈ ಬಗ್ಗೆ ನಾನು ಹೆಚ್ಚು ಹೇಳಬೇಕೇ ಒಂದು ಕುಟುಂಬವು ಹಲವಾರು ತಲೆಮಾರುಗಳಿಂದ ಪಕ್ಷವನ್ನು ನಡೆಸುತ್ತಿದ್ದರೆ, ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಕಾಂಗ್ರೆಸ್ ನತ್ತ ಪ್ರಧಾನಿ ಕುಟುಕಿದರು. 

ಇಂದು ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದ ದಿನ ಕೂಡ ಆಗಿದ್ದು, 13 ವರ್ಷಗಳ ಹಿಂದೆ ಘಟನೆ ನಡೆದಿತ್ತು. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪೊಲೀಸರನ್ನು ಸಹ ಪ್ರಧಾನಿ ಸ್ಮರಿಸಿದರು. 

ಸಂವಿಧಾನ ದಿನ: 1949 ರಲ್ಲಿ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ರಾಷ್ಟ್ರವು ಸಂವಿಧಾನ ದಿನವನ್ನು ಆಚರಿಸುತ್ತಿದೆ. ಇದರ ಮಹತ್ವವನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2015 ರಲ್ಲಿ ಸಂವಿಧಾನ ದಿನಾಚರಣೆಯನ್ನು ಪ್ರಾರಂಭಿಸಿತು. 

ವಿರೋಧ ಪಕ್ಷಗಳಿಂದ ಬಹಿಷ್ಕಾರ: ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳ ನಾಯಕರು ಭಾಗವಹಿಸಿಲ್ಲ. ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ್ದವು. 

SCROLL FOR NEXT