ದೇಶ

ಲಖಿಂಪುರ ಹಿಂಸಾಚಾರ: ಪ್ರಿಯಾಂಕಾ ಬಂಧನ, ಲಖನೌ ವಿಮಾನ ನಿಲ್ದಾಣದಿಂದ ತೆರಳದಂತೆ ಬಘೇಲ್ ಗೆ ನಿರ್ಬಂಧ

Srinivas Rao BV

ಲಖಿಂಪುರ್: ಹಿಂಸಾಚಾರಗ್ರಸ್ತ ಲಖಿಂಪುರ್ ಗೆ ತೆರಳುತ್ತಿದ್ದ ಪ್ರಿಯಾಂಕ ಗಾಂಧಿ ಅವರನ್ನು ಒಂದು ದಿನಕ್ಕೂ ಹೆಚ್ಚಿನ ಸಮಯ ಪಿಎಸಿ ಅತಿಥಿ ಗೃಹದಲ್ಲಿ ಇರಿಸಿದ್ದ ಬಳಿಕ ಅವರನ್ನು ಈಗ ಸೀತಾಪುರ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.

ಪ್ರಿಯಾಂಕ ಗಾಂಧಿಯೊಂದಿಗೆ ಇನ್ನೂ 10 ಕಾಂಗ್ರೆಸ್ಸಿಗರು ಈಗ ಸಿಆರ್ ಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಅಧಿಕೃತವಾಗಿ ಬಂಧನಕ್ಕೊಳಗಾಗಿದ್ದಾರೆ.  

ಪೊಲೀಸ್ ಮೂಲಗಳ ಪ್ರಕಾರ ಉದ್ದೇಶಪೂರ್ವಕವಾಗಿ ಎಸಗಬಹುದಾದ ಅಪರಾಧಗಳನ್ನು ತಡೆಗಟ್ಟುವುದಕ್ಕಾಗಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಭಾನುವಾರ ಲಖಿಂಪುರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ರೈತರರ ನಡುವೆ ಹಿಂಸಾಚಾರ ಭುಗಿಲೆದ್ದ ಪರಿಣಾಮವಾಗಿ ನಾಲ್ವರು ರೈತರು ಸೇರಿದಂತೆ 8 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಬೆನ್ನಲ್ಲೇ ಪ್ರಿಯಾಂಕ ಗಾಂಧಿ ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳುವುದಕ್ಕಾಗಿ ಲಖಿಂಪುರಕ್ಕೆ ತೆರಳುತ್ತಿದ್ದಾಗ ಆಕೆಯನ್ನು ಸೀತಾಪುರ್ ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದು ಪಿಎಸಿ ಅತಿಥಿಗೃಹದಲ್ಲಿರಿಸಲಾಗಿತ್ತು.

ಈಗ ವಿವಿಧ ಸಿಆರ್ ಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಿಯಾಂಕ ಗಾಂಧಿ ಅವರನ್ನು ಹಾಗೂ ಇತರ ಕಾಂಗ್ರೆಸ್ ನಾಯಕರಾದ  ದೀಪೇಂದ್ರ ಸಿಂಗ್ ಹೂಡ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು, ಪಕ್ಷದ ಎಂಎಲ್ ಸಿ ದೀಪಕ್ ಸಿಂಗ್, ಸಂದೀಪ್ ರಾಜ್ ಕುಮಾರ್, ನರೇಂದ್ರ ಶೇಖಾವತ್, ಯೋಗೇಂದ್ರ ಹರಿಕಾಂತ್, ಧೀರಜ್ ಗುರ್ಜರ್ ಹಾಗೂ ಅಮಿತ್ ಅವರನ್ನು ಬಂಧಿಸಲಾಗಿದೆ.  ಸಿಆರ್ ಪಿಸಿಯ ಸೆಕ್ಷನ್ 107, 116, 151 ರ ಅಡಿ ( ಉದ್ದೇಶಪೂರ್ವಕವಾಗಿ ಎಸಗಬಹುದಾದ ಅಪರಾಧ ಕೃತ್ಯಗಳ ತಡೆ)ಯಡಿ ಬಂಧಿಸಲಾಗಿದೆ. ಈಗ ಕಾಂಗ್ರೆಸ್ ನಾಯಕರನ್ನು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಬಹುದಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸದ್ಯಕ್ಕೆ ಪಿಎಸಿ ಅತಿಥಿ ಗೃಹದಲ್ಲೇ ಬಂಧಿತ ಕಾಂಗ್ರೆಸ್ ನಾಯಕರನ್ನು ಇರಿಸಲಾಗಿದೆ. 

ಈ ಬಗ್ಗೆ ಎಸ್ ಹೆಚ್ಒ ಬ್ರಿಜೇಶ್ ಕುಮಾರ್ ತ್ರಿಪಾಠಿ ಮಾಹಿತಿ ನೀಡಿದ್ದು, ಸೋಮವಾರದಂದು ಬೆಳಿಗ್ಗೆ 4:30 ಕ್ಕೆ ಪ್ರಿಯಾಂಕ ಅವರನ್ನು ಲಖಿಂಪುರದ ಮಾರ್ಗಮಧ್ಯದಲ್ಲಿ ತಡೆಯಲಾಗಿತ್ತು. ಅಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು ಪರಿಸ್ಥಿತಿ ಚೆನ್ನಾಗಿರದ ಕಾರಣ ಅವರನ್ನು ತಡೆಯಲಾಗಿತ್ತು. ಅವರು ಪೊಲೀಸ್ ಅಧಿಕಾರಿಗಳ ಮಾತನ್ನು ಕೇಳದ ಕಾರಣ ಅವರನ್ನು ಪಿಎಸಿ ಗೆಸ್ಟ್ ಹೌಸ್ ಗೆ ಕರೆದೊಯ್ಯಲಾಯಿತು ಈಗ ಮುಂದಿನ ಕ್ರಮವನ್ನು ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಿಯಾಂಕ ಗಾಂಧಿ ವಾಧ್ರ ಅವರು ಬಂಧನಕ್ಕೆ ಒಳಗಾಗಿದ್ದರೂ ಕೋರ್ಟ್ ಗೆ ಹಾಜರುಪಡಿಸುವ ಅಗತ್ಯವೇನು ಇಲ್ಲ. ಅಗತ್ಯವಿದ್ದರೆ ಮ್ಯಾಜಿಸ್ಟ್ರೇಟ್ ಎಲ್ಲಿಂದ ಬೇಕಾದರೂ ವಿಚಾರಣೆ ನಡೆಸುವ ಕೆಲವು ಸೆಕ್ಷನ್ ಗಳು ಸಿಆರ್ ಪಿಸಿಯಲ್ಲಿವೆ ಎನ್ನುತ್ತಿವೆ ಅಧಿಕಾರಿ ಮೂಲಗಳು

ಇದೇ ವೇಳೆ ಉತ್ತರ ಪ್ರದೇಶದಲ್ಲಿ ಹಿಂಸಾಚಾರದಲ್ಲಿ ಮೃತಪಟ್ಟಿದ್ದ ರೈತರ ಕುಟುಂಬಗಳಿಗೆ ಸಾಂತ್ವನ ಹೇಳುವುದಕ್ಕಾಗಿ ಲಖಿಂಪುರ್ ಗೆ ತೆರಳುತ್ತಿದ್ದ  ಚತ್ತೀಸ್ ಗಢ ಸಿಎಂ ಅವರು ಲಖನೌ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಆದರೆ ಅವರನ್ನು ವಿಮಾನ ನಿಲ್ದಾಣ ಬಿಟ್ಟು ತೆರಳದಂತೆ ನಿರ್ಬಂಧ ವಿಧಿಸಲಾಗಿದೆ.

SCROLL FOR NEXT