ದೇಶ

ಉತ್ತರಾಖಂಡದಲ್ಲಿ ವರುಣನ ಅಬ್ಬರ: ಸಾವಿನ ಸಂಖ್ಯೆ 52ಕ್ಕೆ ಏರಿಕೆ; ಉತ್ತರ ಪ್ರದೇಶ, ಬಂಗಾಳ, ಸಿಕ್ಕಿಂನಲ್ಲೂ ಮಳೆಯ ಆರ್ಭಟ

Lingaraj Badiger

ನವದೆಹಲಿ: ಮಳೆಯಿಂದ ತತ್ತರಿಸಿರುವ ಉತ್ತರಾಖಂಡದಲ್ಲಿ ಬುಧವಾರ ಮತ್ತೆ ಆರು ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇದರೊಂದಿಗೆ ಹಿಮಾಲಯನ್ ರಾಜ್ಯದಲ್ಲಿ ಮಳೆ ಸಂಬಂಧಿ ಅವಘಡಗಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ 52ಕ್ಕೆ ತಲುಪಿದೆ.

ಉತ್ತರ ಪ್ರದೇಶ, ಸಿಕ್ಕಿಂ ಮತ್ತು ಉತ್ತರ ಬಂಗಾಳದ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆ ಭೂಕುಸಿತ ಸಂಭವಿಸಿದೆ. ಪರಿಣಾಮ ಗ್ಯಾಂಗ್ಟಾಕ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 10 ಅನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಕಳೆದ ಎರಡು ದಿನಗಳಿಂದ ಉತ್ತರ ಪ್ರದೇಶದ ಬರೇಲಿ ಮತ್ತು ಪಿಲಿಭಿತ್ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ನಿರಾಶ್ರಿತರಾಗಿದ್ದಾರೆ.

ಉತ್ತರಾಖಂಡದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 17 ಜನರು ಗಾಯಗೊಂಡಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ. 

ನಾಪತ್ತೆಯಾದವರ ಅಧಿಕೃತ ಪಟ್ಟಿಯಲ್ಲಿ ಟ್ರೆಕ್ಕಿಂಗ್ ತೆರಳಿದ್ದ 11 ಜನರ ತಂಡದ ಹೆಸರಿಲ್ಲ. ಉತ್ತರಕಾಶಿಯಿಂದ ಹೊರಟ ಈ ತಂಡ ಹಿಮಾಚಲ ಪ್ರದೇಶದ ಚಿಟ್ಕುಲ್ ಅನ್ನು ತಲುಪಿಲ್ಲ.

ಮಳೆಯಿಂದ ಹೆಚ್ಚು ಹಾನಿಗೊಳಗಾದ ರಾಜ್ಯದ ಕುಮಾನ್ ಪ್ರದೇಶದಲ್ಲಿ 46 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉಧಮ್ ಸಿಂಗ್ ನಗರ ಮತ್ತು ಚಂಪಾವತ್ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ, ಪರಿಶೀಲನೆ ನಡೆಸಿದರು.

SCROLL FOR NEXT