ನವದೆಹಲಿ: ದೇಶದಲ್ಲಿನ ಹಾಲಿ ವೈವಿಧ್ಯಮಯ ಪರಿಸ್ಥಿತಿಗಳನ್ನು ನೋಡಿದರೆ, ಮನೆ-ಮನೆಗೆ ಕೋವಿಡ್-19 ಲಸಿಕೆ ಕಾರ್ಯಸಾಧ್ಯವಲ್ಲ ಮತ್ತು ಈಗಿರುವ ನೀತಿಯನ್ನು ರದ್ದುಗೊಳಿಸಲು ಸಾಮಾನ್ಯ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ವಿಕಲಚೇತನರು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಜನರಿಗೆ ಮನೆ ಮನೆಗೆ ಕೋವಿಡ್ -19 ಲಸಿಕೆ ನೀಡುವಂತೆ ಕೋರಿ ವಕೀಲರ ಸಂಸ್ಥೆಯ ಮನವಿಯನ್ನು ಸ್ವೀಕರಿಸಲು ನಿರಾಕರಿಸಿದ ಸರ್ವೋಚ್ಛ ನ್ಯಾಯಾಲಯ, ಲಸಿಕೆ ಹಾಕುವ ಕಾರ್ಯವು ಈಗಾಗಲೇ ಪ್ರಗತಿಯಲ್ಲಿದೆ. ದೇಶದ ಶೇ.60ರಷ್ಟು ಜನಸಂಖ್ಯೆಗೆ ಮೊದಲ ಡೋಸ್ ಅನ್ನು ನೀಡಲಾಗಿದೆ ಎಂದು ಹೇಳಿದೆ.
ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಅರ್ಜಿದಾರರಾದ 'ಯೂತ್ ಬಾರ್ ಅಸೋಸಿಯೇಷನ್' ಅನ್ನು ತನ್ನ ಸಲಹೆಗಳೊಂದಿಗೆ ಆರೋಗ್ಯ ಸಚಿವಾಲಯದ ಸಮರ್ಥ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಕೇಳಿತು.
ಇದನ್ನೂ ಓದಿ: ಆಸ್ಪತ್ರೆಗಳು ಮಾನವೀಯ ಸೇವೆ ಸಲ್ಲಿಸುವ ಬದಲು ಬೃಹತ್ ರಿಯಲ್ ಎಸ್ಟೇಟ್ ಉದ್ಯಮಗಳಂತೆ ಮಾರ್ಪಟ್ಟಿವೆ: ಸುಪ್ರೀಂ ಕೋರ್ಟ್
ಅಲ್ಲದೆ ಇದೇ ವೇಳೆ, ದೇಶದ ವೈವಿಧ್ಯತೆಯ ದೃಷ್ಟಿಯಿಂದ ಸಾಮಾನ್ಯ ನಿರ್ದೇಶನಗಳನ್ನು ಜಾರಿಗೊಳಿಸುವುದು ಕಾರ್ಯಸಾಧ್ಯವಲ್ಲ ಮತ್ತು ಪ್ರಾಯೋಗಿಕವಲ್ಲ ಎಂದು ಅದು ಹೇಳಿದೆ ಮತ್ತು "ಜಾರಿಗೊಳಿಸಲಾದ ಯಾವುದೇ ನಿರ್ದೇಶನಗಳು ಸರ್ಕಾರದ ಅಸ್ತಿತ್ವದಲ್ಲಿರುವ ಲಸಿಕೆ ನೀತಿಗೆ ಅಡ್ಡಿಯಾಗಬಾರದು. ಲಡಾಖ್ನಲ್ಲಿ ಕೇರಳಕ್ಕಿಂತ ಪರಿಸ್ಥಿತಿ ಬೇರೆ ಇದೆ. ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಬೇರೆ ರಾಜ್ಯಕ್ಕಿಂತ ಭಿನ್ನವಾಗಿದೆ. ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಗ್ರಾಮೀಣ ಪ್ರದೇಶಗಳಿಗಿಂತ ಭಿನ್ನವಾಗಿದೆ. ಈ ವಿಶಾಲವಾದ ದೇಶದಲ್ಲಿ ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನ ರೀತಿಯ ಸಮಸ್ಯೆಗಳಿವೆ. ಕೇವಲ ಒಂದು ಅರ್ಜಿಯಿಂದ ನೀವು ಇಡೀ ದೇಶಕ್ಕೆ ಆದೇಶವನ್ನು ಬಯಸುತ್ತಿದ್ದೀರಿ. ವ್ಯಾಕ್ಸಿನೇಷನ್ ಅಭಿಯಾನ ಈಗಾಗಲೇ ಪ್ರಗತಿಯಲ್ಲಿದೆ ಮತ್ತು ಶೇ .60 ಕ್ಕಿಂತ ಹೆಚ್ಚು ಜನಸಂಖ್ಯೆಗೆ ಮೊದಲ ಡೋಸ್ ನೀಡಲಾಗಿದೆ. ಹಾಲಿ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಇದು ಆಡಳಿತದ ವಿಷಯವಾಗಿದ್ದು, ಈಗಿರುವ ನೀತಿಯನ್ನು ರದ್ದುಗೊಳಿಸುವಂತೆ ಆದೇಶಿಸಲು ನಮಗೆ ಸಾಧ್ಯವಿಲ್ಲ ಎಂದು ಅದು ಹೇಳಿದೆ.
ಅಲ್ಲದೆ ಈ ಅರ್ಜಿಯನ್ನು ಕಠಿಣ ರೀತಿಯಲ್ಲಿ ನಿರ್ವಹಿಸಲಾಗುವುದಿಲ್ಲ ಎಂದು ಅಸೋಸಿಯೇಶನ್ ಪರ ಹಾಜರಾದ ವಕೀಲ ಬೇಬಿ ಸಿಂಗ್ಗೆ ಸುಪ್ರೀಂ ಕೋರ್ಟ್ ಹೇಳಿತು.
ಇದನ್ನೂ ಓದಿ: ಕೋವಿಡ್ 2ನೇ ಅಲೆ ವೇಳೆ ದೆಹಲಿ ಸರ್ಕಾರ ಅಮ್ಲಜನಕ ಅಗತ್ಯವನ್ನು ಉತ್ಪ್ರೇಕ್ಷಿಸಿತ್ತು: ಸುಪ್ರೀಂ ಕೋರ್ಟ್ ಸಮಿತಿ ಮಾಹಿತಿ
ಅರ್ಜಿದಾರರ ವಕೀಲರು ಆರೋಗ್ಯ ಸಚಿವಾಲಯವು ಪ್ರಾತಿನಿಧ್ಯವನ್ನು ಸಮಯಕ್ಕೆ ಅನುಗುಣವಾಗಿ ಪರಿಗಣಿಸುವಂತೆ ಕೇಳಬೇಕೆಂದು ಹೇಳಿದಾಗ, "ಈ ಸಮಯದಲ್ಲಿ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಎಷ್ಟು ಒತ್ತಡದಲ್ಲಿದ್ದಾರೆ ಎಂದು ನಮಗೆ ತಿಳಿದಿದೆ, ದೇಶದ ಇತರ ಅಂಶಗಳನ್ನು ನೋಡುವುದರ ಜೊತೆಗೆ ಅವರು ಆಕ್ಸಿಜನ್ ಪೂರೈಕೆಗಳನ್ನು ಹುಡುಕಬೇಕು ಎಂದು ಪೀಠ ಹೇಳಿತು.
ಕೋವಿನ್ ಪೋರ್ಟಲ್ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವಲ್ಲಿ ತೊಂದರೆ ಎದುರಿಸುತ್ತಿರುವ ಕಾರಣ ಕಡಿಮೆ ಸೌಲಭ್ಯ, ವಿಕಲಚೇತನ, ದುರ್ಬಲ ವರ್ಗದವರಿಗೆ ಮನೆ ಬಾಗಿಲಿಗೆ ಕೋವಿಡ್ ಲಸಿಕೆ ಹಾಕಲು ಭಾರತ ಒಕ್ಕೂಟ ಮತ್ತು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.