ದೇಶ

'ಹರ್ ಘರ್ ತಿರಂಗಾ' ಅಭಿಯಾನ: ಧ್ವಜಗಳ ಗೌರವಯುತ ವಿಲೇವಾರಿಯ ಚಿಂತೆ

Lingaraj Badiger

ನವದೆಹಲಿ: ದೇಶದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯುತ್ತಿರುವ 'ಹರ್ ಘರ್ ತಿರಂಗಾ' ಅಭಿಯಾನ ವೇಗ ಪಡೆದುಕೊಳ್ಳುತ್ತಿದೆ. ಆದರೆ ರಾಷ್ಟ್ರ ರಾಜಧಾನಿಯ ನಿವಾಸಿಗಳ ಕಲ್ಯಾಣ ಸಂಘ(RWAs) ಸಂಭ್ರಮ ಆಚರಣೆಯ ನಂತರ ಈ ಧ್ವಜಗಳನ್ನು ಗೌರವಯುತವಾಗಿ ವಿಲೇವಾರಿ ಮಾಡುವ ಬಗ್ಗೆ ಚಿಂತಿಸುತ್ತಿದೆ.

ನಿವಾಸಿಗಳ ಕಲ್ಯಾಣ ಸಂಘ ರಾಷ್ಟ್ರಧ್ವಜಕ್ಕೆ ಅಗೌರವವಾಗುವುದನ್ನು ತಪ್ಪಿಸುವ ಬಗ್ಗೆ ಯೋಚಿಸುತ್ತಿದ್ದು, ಆಚರಣೆಯ ನಂತರ ಅನುಸರಿಸಬೇಕಾದ ನಿಯಮಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಜಾಗೃತಿ ಮೂಡಿಸುತ್ತಿದೆ. ಅವರಲ್ಲಿ ಕೆಲವರು ಮನೆಗಳಿಂದ ಧ್ವಜಗಳನ್ನು ಸಂಗ್ರಹಿಸಿ ಅವುಗಳನ್ನು ಗೌರವಯುತವಾಗಿ ವಿಲೇವಾರಿ ಮಾಡಲು ಅಭಿಯಾನ ಆರಂಭಿಸಲು ಮುಂದಾಗಿದ್ದಾರೆ.

‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಾಗಿದೆ. ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ತಮ್ಮ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜಗಳನ್ನು ಹಾರಿಸಲು ಅಥವಾ ಪ್ರದರ್ಶಿಸಲು ಕೇಂದ್ರ ಸರ್ಕಾರ ಜನತೆಗೆ ಕರೆ ನೀಡಿದೆ.

ಧ್ವಜಗಳ ವಿಲೇವಾರಿ ಕುರಿತು ಗಮನಹರಿಸಿರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(MCD) ತನ್ನ ಪೌರ ಕಾರ್ಮಿಕರಿಗೆ ಕಳಂಕಿತ ಅಥವಾ ಮಣ್ಣಾದ ಧ್ವಜಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವಂತೆ ವಿಶೇಷ ಸೂಚನೆನೀಡಿದೆ.

"ಎಂಸಿಡಿ ರಾಷ್ಟ್ರಧ್ವಜಕ್ಕೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಘನತೆಯನ್ನು ನೀಡುತ್ತದೆ. ಇದರ ಅನುಸಾರವಾಗಿ, ಕಳಂಕಿತ ಅಥವಾ ಮಣ್ಣಾದ ಧ್ವಜಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಆಯಾ ವಲಯದ ನಿಯಂತ್ರಣ ಕೊಠಡಿಯಲ್ಲಿಡಲು ಪೌರ ಕಾರ್ಮಿಕರಿಗೆ ವಿಶೇಷ ಸೂಚನೆಗಳನ್ನು ನೀಡಿದೆ" ಎಂದು ಎಂಸಿಡಿ ನಿರ್ದೇಶಕ (ಪತ್ರಿಕಾ ಮತ್ತು ಮಾಹಿತಿ ) ಅಮಿತ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

SCROLL FOR NEXT