ದೇಶ

ದೆಹಲಿ: ನಾನು ಮಾಡಿದ್ದು ದೊಡ್ಡ ತಪ್ಪು, ನನ್ನನ್ನು ಕ್ಷಮಿಸಿ; ಎಎಪಿ ಸೇರಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್‌ಗೆ ಮರಳಿದ ನೂತನ ಸದಸ್ಯರು

Shilpa D

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ) ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತ ಪಡೆದು ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿದಿದೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಇಬ್ಬರು ನೂತನ ಸದಸ್ಯರು ಮತ್ತು ದೆಹಲಿ ಕಾಂಗ್ರೆಸ್‌ನ ಉಪಾಧ್ಯಕ್ಷ ನಾಯಕ ಅಲಿ ಮೆಹ್ದಿ ಅವರು ಎಎಪಿ ಸೇರ್ಪಡೆಗೊಂಡ ಕೆಲವೇ ಗಂಟಗಳಲ್ಲಿ ಪುನಃ ಕಾಂಗ್ರೆಸ್‌ಗೆ ಮರಳಿದ್ದಾರೆ. ಬೆನ್ನಲ್ಲೇ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ.

ಕಾಂಗ್ರೆಸ್‌ 250 ಕ್ಷೇತ್ರಗಳಲ್ಲಿ ಕೇವಲ 9 ಸೀಟುಗಳನ್ನು ಮಾತ್ರ ಗೆದ್ದಿದೆ. ಈ ಒಂಬತ್ತು ಸೀಟುಗಳಲ್ಲಿ ಇಬ್ಬರು ಸದಸ್ಯರು ಶುಕ್ರವಾರ (ಡಿ.9 ರಂದು) ಸಂಜೆ ಆಪ್‌ ಗೆ ಸೇರಿದ್ದರು. ಸೇರಿದ ಒಂದು ದಿನದೊಳಗೆಯೇ (ಶನಿವಾರ) ಕಾಂಗ್ರಸ್‌ ಪಕ್ಷಕ್ಕೆ ಮತ್ತೆ ಮರಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಅಲಿ ಮೆಹ್ದಿ, ಎಎಪಿಗೆ ಹೋಗುವ ಮೂಲಕ ದೊಡ್ಡ ತಪ್ಪು ಮಾಡಿದೆ. ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಇದಕ್ಕಾಗಿ ರಾಹುಲ್‌ ಗಾಂಧಿ ಅವರ ಬಳಿ ಕೈಜೋಡಿಸಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದಾರೆ. ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ಅವರಿಗೆ ನಿಷ್ಠರಾಗಿರುವುದಾಗಿ ತಿಳಿಸಿದ್ದಾರೆ.

ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಲಿ ಮೆಹದಿ, ಮುಸ್ತಫಾಬಾದ್‌ ಕ್ಷೇತ್ರದಲ್ಲಿ ಗೆದ್ದ ಸಬಿಲಾ ಬೇಗಂ ಬ್ರಿಜ್‌ಪುರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ನಾಜಿಯಾ ಖಾತೂನ್ ಹಾಗೂ 300 ಮತಗಳಿಂದ ಸೋತಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲೀಂ ಅನ್ಸಾರಿ ಶುಕ್ರವಾರ ಸಂಜೆ ಆಪ್‌ ಪಕ್ಷಕ್ಕೆ ಸೇರಿದ್ದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಇಮ್ರಾನ್‌ ಪ್ರತಾಪ್‌ಗರ್ಹಿ, ಮಧ್ಯ ರಾತ್ರಿ 2 ಗಂಟೆಯ ಸಮಯವಾಗಿತ್ತು. ಮುಸ್ತಫಬಾದ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದಿದ್ದ ಪುರಸಭೆ ಸದಸ್ಯರು ಪಕ್ಷಕ್ಕೆ ಮರಳಿದ್ದಾರೆ. ಅವರನ್ನು ಎಎಪಿಗೆ ಸೇರ್ಪಡೆಗೊಳಿಸಲು ಕುತಂತ್ರ ನಡೆಸಲಾಗಿತ್ತು. ಕೆಲವೇ ಗಂಟೆಗಳಲ್ಲಿ ತಮ್ಮ ತಪ್ಪಿನ ಅರಿವಾಗಿ ಕಾಂಗ್ರೆಸ್‌ಗೆ ವಾಪಸ್‌ ಆಗಿದ್ದಾರೆ ಎಂದರು.

SCROLL FOR NEXT