ದೇಶ

ಚುನಾವಣೆ, ರಾಜಕೀಯ ಬಿಟ್ಟು ಗಡಿ ಘರ್ಷಣೆಯತ್ತ ಗಮನಹರಿಸಿ: ಪ್ರಧಾನಿ ಮೋದಿಗೆ ಶಿವಸೇನೆ ಆಗ್ರಹ

Manjula VN

ನವದೆಹಲಿ: ಚುನಾವಣೆ, ರಾಜಕೀಯ ತನಿಖಾ ಸಂಸ್ಥೆ, ವಿರೋಧ ಪಕ್ಷಗಳನ್ನು ಬಿಟ್ಟು ಮೊದಲು ಗಡಿ ಘರ್ಷಣೆ ವಿಚಾರಗಳತ್ತ ಗಮನ ಹರಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಶಿವಸೇನೆ ಮಂಗಳವಾರ ಆಗ್ರಹಿಸಿದೆ.

ಭಾರತ-ಚೀನಾ ಗಡಿ ಘರ್ಷಣೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಎಂಟು ದಿನಗಳಿಂದ ದೇಶದ ರಕ್ಷಣಾ ಸಚಿವರು ಏನನ್ನು ಮುಚ್ಚಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. "ಗುಜರಾತ್ ರಾಜ್ಯ ಹಾಗೂ ಇತರೆ ಪ್ರದೇಶಗಳಲ್ಲಿನ ಚುನಾವಣೆಯವರೆಗೆ, ಚೀನಾವು ಶಾಂತವಾಗಿತ್ತು ಅಥವಾ ಅವರನ್ನು ಸುಮ್ಮನಿರಲು ಹೇಳಲಾಗಿತ್ತು. ಲಡಾಖ್ ಮತ್ತು ಡೋಕ್ಲಾಮ್ ಬಳಿಕ ಇದೀಗ ಚೇನಾ ಸೇನೆ ತವಾಂಗ್‌ಗೆ ಪ್ರವೇಶಿಸಿದೆ. ಚೀನಾದ ಪಡೆಗಳು ಲಡಾಖ್‌ನಿಂದ ಹಿಂದೆ ಸರಿಯುವಂತೆ ಸೂಚಿಸಲಾಗಿತ್ತು. ಇದೀಗ ತವಾಂಗ್‌ಗೆ ಪ್ರವೇಶಿಸುತ್ತಿದ್ದಾರೆ, ದೇಶದ ಆಡಳಿತ ನಡೆಸುತ್ತಿರುವವರು ರಾಜಕೀಯ, ತನಿಖಾ ವ್ಯವಸ್ಥೆ, ವಿಧಾನಸಭೆ, ವಿರೋಧ ಪಕ್ಷಗಳ ಮೇಲೆ ಗಮನಹರಿಸುವ ಬದಲು ದುರ್ಬಲ ಗಡಿಗಳತ್ತ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ.

ಬಳಿಕ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾವತ್, "ಚೀನಾದಂತಹ ಶತ್ರು ಮೂರು ಕಡೆಯಿಂದ ಪ್ರವೇಶಿಸುತ್ತಿದೆ, ನಾವು ಅಲ್ಲಿ ಗಮನ ಹರಿಸಿದರೆ, ಅದು ನಿಜವಾಗಿಯೂ ದೇಶಕ್ಕೆ ಸೇವೆ ಸಲ್ಲಿಸಿದಂತೆ, ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ರಾಷ್ಟ್ರೀಯ ಭದ್ರತೆಯ ವಿಷಯವನ್ನು ಪ್ರಸ್ತಾಪಿಸಲಿವೆ ಎಂದು ಹೇಳಿದರು.

ಸರಕಾರವು ರಾಜಕೀಯದಲ್ಲಿ ತೊಡಗಿರುವ ಕಾರಣ, ಚೀನಾ, ಪಾಕಿಸ್ತಾನ ಮತ್ತು ಇತರ ಎಲ್ಲಾ ಶತ್ರುಗಳು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ. ಸರ್ಕಾರವು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗುಜರಾತ್ ಚುನಾವಣೆ ಗೆಲ್ಲುವ ಉತ್ಸಾಹ ನಡೆಯುತ್ತಿರುವಾಗ, ಚೀನಾದ ಸೈನಿಕರು ತವಾಂಗ್‌ಗೆ ನುಸುಳುತ್ತಿದ್ದರು. ಈ ದೇಶದ ಭದ್ರತೆಯನ್ನು ರಾಜಕೀಯಗೊಳಿಸಿದ್ದಾರೆ ಮತ್ತು ಸಂಭ್ರಮಿಸಿದ್ದಾರೆ. ರಾಜಕೀಯ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ನೀವು ನೋಡಬೇಕಾದರೆ, ತವಾಂಗ್‌ನಲ್ಲಿ ನಡೆದ ಘಟನೆಯು ದೇಶದ ದುರದೃಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅರುಣಾಚಲ ಪ್ರದೇಶಕ್ಕೆ ಚೀನಾ ಪ್ರವೇಶಿಸುತ್ತಿರುವುದು ಇದೇ ಮೊದಲಲ್ಲ. ಚೀನಾ ಯಾವಾಗಲೂ ಅರುಣಾಚಲ ಪ್ರದೇಶವನ್ನು ತಮ್ಮ ನಕ್ಷೆಯ ಭಾಗವಾಗಿ ತೋರಿಸಿದೆ ಎಂದಿದ್ದಾರೆ.

ಇದೇ ವೇಳೆ ಭಾರತೀಯ ರಕ್ಷಣಾ ಪಡೆಯನ್ನು ಟೀಕಿಸಿದ್ದಾರೆ, ಸರ್ಕಾರ ಹೆಚ್ಚು ಜಾಗರೂಕತೆಯಿಂದ ಕೆಲಸ ಮಾಡಬೇಕಾಗಿತ್ತು. ಆದರೆ ಅದು ನಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ.

SCROLL FOR NEXT