ದೇಶ

ಮೊಹಮ್ಮದ್ ಜುಬೈರ್ ಕ್ರಿಮಿನಲ್ ಪ್ರಕರಣದ ಪ್ರಕ್ರಿಯೆಯ ವಿಷವರ್ತುಲದಲ್ಲಿ ಸಿಲುಕಿದ್ದರು: ಸುಪ್ರೀಂ ಕೋರ್ಟ್

Srinivas Rao BV

ನವದೆಹಲಿ: ಮೊಹಮ್ಮದ್ ಜುಬೈರ್ ವಿರುದ್ಧ ಇರುವ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಆರೋಪವನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆಗಳನ್ನು ನೀಡಿದೆ. 

ಆರೋಪಿಯ ವಿರುದ್ಧದ ಒಂದೇ ಆರೋಪಕ್ಕೆ ಹಲವು ಸ್ಥಳಗಳಲ್ಲಿ ಎಫ್ಐಆರ್ ಗಳನ್ನು ದಾಖಲಿಸುವುದು ಸಮಂಜಸವಲ್ಲ ಎಂಬುದು ಜುಬೈರ್ ಗೆ ಜಾಮೀನು ಮಂಜೂರು ಮಾಡಿರುವ ಸುಪ್ರೀಂ ಕೋರ್ಟ್ ನ ಹೇಳಿಕೆಯ ಒಟ್ಟಾರೆಯ ಸಾರಾಂಶ. 

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧವಿರುವ ದ್ವೇಷ ಭಾಷಣ ಅಥವಾ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಪ್ರಕರಣದಲ್ಲಿ ಉತ್ತರ ಪ್ರದೇಶವೂ ಸೇರಿದಂತೆ ಹಲವೆಡೆ ಒಂದಕ್ಕಿಂತ ಹೆಚ್ಚು ಎಫ್ಐಆರ್ ಗಳು ದಾಖಲಾಗಿದ್ದವು. ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದ ಎಫ್ಐಆರ್ ಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಮಂಜೂರು ಮಾಡಿದೆ. 

"ಕ್ರಿಮಿನಲ್ ಪ್ರಕರಣಗಳ ಪ್ರಕ್ರಿಯೆ ಜುಬೈರ್ ವಿರುದ್ಧ ನಿರಂತರವಾಗಿ ಕೆಲಸ ಮಾಡಿದೆ. ಬಂಧನ ಎಂಬುದು ಶಿಕ್ಷೆಯ ಸಾಧನವಾಗಬಾರದು. ಮೊಹಮ್ಮದ್ ಜುಬೈರ್ ಕ್ರಿಮಿನಲ್ ಪ್ರಕರಣದ ಪ್ರಕ್ರಿಯೆಯ ವಿಷವರ್ತುಲದಲ್ಲಿ ಸಿಲುಕಿದ್ದರು, ಈ ಪ್ರಕರಣದಲ್ಲಿ ಪ್ರಕ್ರಿಯೆಗಳೇ ಶಿಕ್ಷೆಯಾಗಿತ್ತು. ಪೊಲೀಸ್ ಅಧಿಕಾರಿಗಳಿಗೆ ವಿಚಾರಣೆಯೂ ಸೇರಿದಂತೆ  ಕ್ರಿಮಿನಲ್ ನ್ಯಾಯ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲು ಅಧಿಕಾರವಿದೆ. ಆದರೆ ಈ ಅಧಿಕಾರ ಅನಿಯಂತ್ರಿತವಾಗಿರಬಾರದು. ವ್ಯಕ್ತಿಗಳನ್ನು ಕೇವಲ ಆರೋಪಗಳ ಆಧಾರದಲ್ಲಿಯಷ್ಟೇ ಅಥವಾ ನ್ಯಾಯಯುತ ವಿಚಾರಣೆ ಇಲ್ಲದೇ ಶಿಕ್ಷಿಸಲು ಸಾಧ್ಯವಿಲ್ಲ. ಬಂಧನ ಎಂಬುದು ಶಿಕ್ಷೆಯ ಸಾಧನವಾಗಬಾರದು, ಆ ರೀತಿಯಾದಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಹರಣವಾಗುವಂತಹ ಗಂಭೀರ ಸಂಭವನೀಯ ಪರಿಣಾಮಗಳಿರುತ್ತವೆ" ಎಂದು ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಸೂರ್ಯಕಾಂತ್ ಹಾಗೂ ಎಎಸ್ ಬೋಪಣ್ಣ ಅವರಿದ್ದ ಪೀಠ ತನ್ನ 21 ಪುಟಗಳ ಆದೇಶದಲ್ಲಿ ಹೇಳಿದೆ. 

ಇದೇ ವೇಳೆ ಜುಬೈರ್ ಜಾಮೀನಿನ ಮೇಲೆ ಇದ್ದಾಗ ಆತನನ್ನು ಟ್ವೀಟ್ ಮಾಡದಂತೆ ನಿರ್ಬಂಧಿಸಬೇಕೆಂಬ ಉತ್ತರ ಪ್ರದೇಶದ ಪರ ವಕೀಲರ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದ್ದು, ಈ ರೀತಿಯ ಆದೇಶಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಲಿದೆ ಹೇಳಿದೆ.

SCROLL FOR NEXT