ದೇಶ

ಕಲಾಪಕ್ಕೆ ಅಡ್ಡಿ: ರಾಜ್ಯಸಭೆ ಎಎಪಿ ಸದಸ್ಯ ಸಂಜಯ್ ಸಿಂಗ್ ಅಮಾನತು

Shilpa D

ನವದೆಹಲಿ: ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸಿರುವುದಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರನ್ನು ಈ ವಾರದ ಕಲಾಪದ ಉಳಿದಿರುವ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ರಾಜ್ಯಸಭೆಯ ಉಪ ಸಭಾಪತಿ ಹರಿವಂಶ ಸಿಂಗ್‌ ತಿಳಿಸಿದ್ದಾರೆ.

ಸಂಜಯ್ ಸಿಂಗ್ ಅವರು, ಸಭಾಧ್ಯಕ್ಷರ ಮೇಜಿಗೆ ಕಾಗದ ಎಸೆದು ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯ ಉಪ ಸಭಾಪತಿ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಮಂಗಳವಾರದಂದು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕೆ ವಿರೋಧ ಪಕ್ಷಗಳ ಒಟ್ಟು 19 ಸಂಸದರನ್ನು ರಾಜ್ಯಸಭೆಯಿಂದ ಒಂದು ವಾರದ ಅವಧಿಗೆ ಅಮಾನತುಗೊಳಿಸಲಾಗಿತ್ತು.

ತೃಣಮೂಲ ಕಾಂಗ್ರೆಸ್‌ನ ಏಳು, ಡಿಎಂಕೆಯ ಆರು, ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ಮೂವರು, ಸಿಪಿಐಎಂನ ಇಬ್ಬರು ಹಾಗೂ ಸಿಪಿಐನ ಒಬ್ಬ ಸಂಸದರನ್ನು ಅಮಾನತುಗೊಳಿಸಲಾಗಿದೆ.

ಪ್ರತಿಪಕ್ಷದ ಸದಸ್ಯರು ಸದನದ ಬಾವಿಯಲ್ಲಿ ಗದ್ದಲ ಎಬ್ಬಿಸುತ್ತಲೇ ಇದ್ದಾಗಲೂ ಧ್ವನಿ ಮತದ ಮೂಲಕ ಪ್ರಸ್ತಾವನೆ ಅಂಗೀಕರಿಸಲಾಯಿತು. ಪ್ರಸ್ತಾವನೆ ಅಂಗೀಕರಿಸಿದ ಕೂಡಲೇ ಸದನ ತೊರೆಯುವಂತೆ ಉಪಸಭಾಪತಿ ಸಿಂಗ್ ಕೇಳಿಕೊಂಡರು. ಪ್ರತಿಪಕ್ಷಗಳ ಸದಸ್ಯರು ಗದ್ದಲ ಮುಂದುವರಿಸಿದ ಹಿನ್ನೆಲೆಯಲ್ಲಿ ಉಪಸಭಾಪತಿ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.

SCROLL FOR NEXT