ದೇಶ

ಬಿಜೆಪಿಯವರು 'ಬೆಟ್ಟ ಅಗೆದು ಇಲಿ ಹಿಡಿಯಲು ಹೊರಟಿದ್ದಾರೆ': 'ರಾಷ್ಟ್ರಪತ್ನಿ' ಹೇಳಿಕೆ ಕುರಿತು ಸ್ಪೀಕರ್ ಗೆ ಅಧೀರ್ ರಂಜನ್ ಪತ್ರ

Sumana Upadhyaya

ನವದೆಹಲಿ: ಕಾಂಗ್ರೆಸ್ ನಾಯಕ ಸಂಸದ ಅಧೀರ್ ರಂಜನ್ ಚೌಧರಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ'ಎಂದು ಸಂಬೋಧಿಸಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು ಅವರಿಂದ ಕ್ಷಮೆಯಾಚನೆ ಕೋರಿದ್ದಾರೆ.

ಚೌಧರಿಯವರು ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ. ವಿಡಿಯೊದಲ್ಲಿ ಚೌಧರಿಯವರು ಭಾರತದ ರಾಷ್ಟ್ರಪತ್ನಿ (Rashtrapatni row) ಪ್ರತಿಯೊಬ್ಬರಿಗೂ ಸಂಬಂಧಪಟ್ಟವರಾಗಿದ್ದು ನಾಳೆ ವಿರೋಧ ಪಕ್ಷದ ಸಂಸದರೆಲ್ಲರೂ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ಸಾಗುತ್ತೇವೆ ಎಂದಿದ್ದಾರೆ.

ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸಂಸದೆಯರು, ಕೇಂದ್ರ ಸಚಿವೆಯರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ನೇತೃತ್ವದಲ್ಲಿ ವಿಷಯ ಪ್ರಸ್ತಾಪಿಸಿ ಚೌಧರಿಯವರ ಕ್ಷಮೆ ಕೇಳಿದರು. ತೀವ್ರ ಗದ್ದಲ, ಕೋಲಾಹಲ ಏರ್ಪಟ್ಟು ಕಲಾಪವನ್ನು 12 ಗಂಟೆಗೆ ಎರಡೂ ಸದನಗಳ ಕಲಾಪವನ್ನು ಮುಂದೂಡಲಾಗಿದೆ. ಸಂಸತ್ತು ಆವರಣದಲ್ಲಿ ಕೇಂದ್ರ ಸಚಿವೆಯರು ಮತ್ತು ಸಂಸದೆಯರು ಭಿತ್ತಿಪತ್ರ ಹಿಡಿದು ಕಾಂಗ್ರೆಸ್ ಹಾಗೂ ಅಧೀರ್ ರಂಜನ್ ಚೌಧರಿ ವಿರುದ್ಧ ಘೋಷಣೆ ಕೂಗುತ್ತಾ ಅವರಿಂದ ಕ್ಷಮೆಯಾಚಿಸಿದರು.

ಚೌಧರಿ ಪ್ರತಿಕ್ರಿಯೆ: ನಾನು ಬಾಯ್ತಪ್ಪಿ ರಾಷ್ಟ್ರಪತ್ನಿ ಎಂದು ಸಂಬೋಧಿಸಿದೆ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ಆಡಳಿತಾರೂಢ ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಸಣ್ಣ ವಿಷಯವನ್ನು ಕ್ಷುಲ್ಲಕ ಕಾರಣಕ್ಕಾಗಿ ದೊಡ್ಡದು ಮಾಡಿ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ, ಬೆಟ್ಟ ಅಗೆದು ಇಲಿ ಹಿಡಿಯಲು ಹೊರಟಿದ್ದಾರೆ ಎಂದರು.

ಸದನದಲ್ಲಿ ಮಾತನಾಡಲು ಸ್ಪೀಕರ್ ಗೆ ಮನವಿ: ತಮ್ಮ ವಿರುದ್ಧದ ಆರೋಪಕ್ಕೆ ಸದನದಲ್ಲಿ ಮಾತನಾಡಲು, ಸ್ಪಷ್ಟನೆ ನೀಡಲು ಅವಕಾಶ ನೀಡುವಂತೆ ಲೋಕಸಭಾಧ್ಯಕ್ಷರಿಗೆ ಮನವಿ ಮಾಡಿರುವ ಅಧೀರ್ ರಂಜನ್ ಚೌಧರಿ ಈ ಸಂಬಂಧ ಪತ್ರ ಬರೆದಿದ್ದಾರೆ.

ಇಂದು ಸದನದಲ್ಲಿ ಕಲಾಪಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ ಅಧೀರ್ ರಂಜನ್ ಚೌಧರಿಯವರು ಈಗಾಗಲೇ ಕ್ಷಮೆ ಕೇಳಿದ್ದಾರೆ ಎಂದು ಹೇಳಿ ಹೊರಟುಹೋದರು.
 

SCROLL FOR NEXT