ದೇಶ

ಸುಲಭ ಬದುಕು, ಸುಲಭ ವ್ಯವಹಾರದಷ್ಟೇ ಸುಲಭ ನ್ಯಾಯ ಕೂಡ ಮುಖ್ಯ: ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: ಸುಲಭವಾಗಿ ಜೀವಿಸುವುದು, ಸುಲಭವಾಗಿ ವ್ಯಾಪಾರ ಮಾಡುವುದರಷ್ಟೇ ಸುಲಭವಾಗಿ ನ್ಯಾಯ ಸಿಗುವುದು ಕೂಡ ಮುಖ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮೊದಲ ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ನಾವು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ವರ್ಷವನ್ನು ಆಚರಿಸುತ್ತಿದ್ದೇವೆ. ಮುಂದಿನ 25 ವರ್ಷಗಳಲ್ಲಿ ದೇಶವನ್ನು ಹೊಸ ದಿಕ್ಕಿನತ್ತ, ಹೊಸ ಎತ್ತರಕ್ಕೆ ಕೊಂಡೊಯ್ಯುವತ್ತ ನಾವು ಕೈಗೊಳ್ಳಬೇಕಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಸಮಯವಾಗಿದೆ. ಈ ಸಂದರ್ಭದಲ್ಲಿ ಜನರಿಗೆ ಸುಲಭವಾಗಿ ನ್ಯಾಯ ಸಿಗುವಂತೆ ಮಾಡುವುದು ಸುಲಭವಾಗಿ ವ್ಯಾಪಾರ ಮಾಡಲು, ಸುಲಭವಾಗಿ ಜೀವಿಸಲು ಅವಕಾಶ ಮಾಡಿಕೊಡುವಷ್ಟೇ ಮುಖ್ಯವಾಗಿದೆ ಎಂದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಜೊತೆಗೆ ವೇದಿಕೆ ಹಂಚಿಕೊಂಡ ಅವರು, ಸಮಾಜಕ್ಕೆ ನ್ಯಾಯಾಂಗ ವ್ಯವಸ್ಥೆ ಹೇಗೆ ಮುಖ್ಯವೋ, ಸರಿಯಾದ ಸಮಯದಲ್ಲಿ ಶೀಘ್ರ ನ್ಯಾಯ ಸಿಗುವಂತೆ ಮಾಡುವುದು ಕೂಡ ಮುಖ್ಯವಾಗಿದೆ. ಇದಕ್ಕೆ ನ್ಯಾಯಾಂಗ ಮೂಲಸೌಕರ್ಯ ಪ್ರಮುಖ ಕೊಡುಗೆ ನೀಡುತ್ತದೆ. ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಶೀಘ್ರ ನ್ಯಾಯ ದೊರಕುವಂತೆ ಮಾಡುವಲ್ಲಿ ಸಾಕಷ್ಟು ಸುಧಾರಣೆಯ ಕೆಲಸಗಳು ನಡೆದಿವೆ ಎಂದರು.

ಇ-ಕೋರ್ಟ್ಸ್ ಮಿಷನ್ ನಡಿ, ವರ್ಚುವಲ್ ಕೋರ್ಟ್ಸ್ ನ್ನು ದೇಶದಲ್ಲಿ ಆರಂಭಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯಂತಹ ಪ್ರಕರಣಗಳನ್ನು ವಿಚಾರಣೆ ನಡೆಸಲು 24 ಗಂಟೆಗಳ ಕೋರ್ಟ್ ಗಳನ್ನು ಆರಂಭಿಸಲಾಗಿದೆ. ಜನರ ಅನುಕೂಲಕ್ಕೆ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದರು.

ದೇಶದಲ್ಲಿ 676 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿದ್ದು (DLSA) ಜಿಲ್ಲಾ ನ್ಯಾಯಾಧೀಶರು ನೇತೃತ್ವ ವಹಿಸಿಕೊಂಡಿರುತ್ತಾರೆ ಅವರು ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. 

SCROLL FOR NEXT