ಮುಂಬೈ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಸಿಎಂ ಉದ್ಧವ್ ಠಾಕ್ರೆ ಜೂ.22 ರಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಅಷ್ಟೇ ಅಲ್ಲದೇ ರಾಜಕೀಯ ಬಿಕ್ಕಟ್ಟನ್ನು ಸರಿಪಡಿಸಲು ಬಿಜೆಪಿ ನಾಯಕರ ಸಂಪರ್ಕದಲ್ಲಿಯೂ ಉದ್ಧವ್ ಠಾಕ್ರೆ ಇದ್ದರು ಎಂಬ ವರದಿಯನ್ನು ಎಎನ್ಐ ಪ್ರಕಟಿಸಿದೆ. ಆದರೆ ಉದ್ಧವ್ ಠಾಕ್ರೆ ಮನವೊಲಿಕೆ ಮಾಡಿದ್ದ ಅಘಾಡಿ ಸರ್ಕಾರದ ಮಿತ್ರ ಪಕ್ಷಗಳು ರಾಜೀನಾಮೆ ನೀಡದಂತೆ ಸಲಹೆ ನೀಡಿದ್ದವು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 'ಅವಿದ್ಯಾವಂತರು, ನಡೆದಾಡುವ ಶವಗಳು'; ರೆಬೆಲ್ ಶಾಸಕರ ವಿರುದ್ಧ ಶಿವಸೇನೆ ವಕ್ತಾರ ಸಂಜಯ್ ರಾವತ್ ವಾಗ್ದಾಳಿ
ಜೂ.22 ರಂದು ರಾಜೀನಾಮೆ ನೀಡಿ ಬಳಿಕ ಶಿವಸೇನೆ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಸ್ಮಾರಕಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಅದ್ಯಾವುದೂ ಆಗಲಿಲ್ಲ. ಸಂಜೆ 5 ಗಂಟೆಗೆ ನಿಗದಿಯಾಗಿದ್ದ ಠಾಕ್ರೆ ಅವರ ಭಾಷಣ 5:30 ಗೆ ನಡೆಯುವುದಕ್ಕೂ ಯೋಜನೆಗಳಲ್ಲಿ ಉಂಟಾದ ದಿಢೀರ್ ಬದಲಾವಣೆಗಳೇ ಕಾರಣ ಎಂದು ತಿಳಿದುಬಂದಿದೆ.
ಜೂ.22 ರಂದು ಫೇಸ್ ಬುಕ್ ಮೂಲಕ ಮಾತನಾಡಿದ್ದ ಠಾಕ್ರೆ, ಬಂಡಾಯ ಶಾಸಕರು ಮುಂಬೈ ಗೆ ವಾಪಸ್ಸಾಗಿ ತಮ್ಮ ರಾಜೀನಾಮೆಗೆ ಬೇಡಿಕೆ ಇಡುವುದಾದರೆ ತಾವು ರಾಜೀನಾಮೆ ನೀಡುವುದಕ್ಕೂ ಸಿದ್ಧ ಎಂದು ಹೇಳಿದ್ದರು.
ಇದನ್ನೂ ಓದಿ: 'ಮಹಾ' ಸರ್ಕಾರ ಬಿಕ್ಕಟ್ಟು: 9 ಬಂಡಾಯ ಸಚಿವರ ಖಾತೆಗಳನ್ನು ಇತರ ಶಾಸಕರಿಗೆ ಹಸ್ತಾಂತರಿಸಿದ ಸಿಎಂ ಉದ್ಧವ್ ಠಾಕ್ರೆ
ಆ ವೇಳೆ 2019 ರಲ್ಲಿ ಸರ್ಕಾರ ರಚನೆಯ ಸಂದರ್ಭದಲ್ಲಿನ ಘಟನೆಗಳನ್ನು ಸ್ಮರಿಸಿದ್ದ ಠಾಕ್ರೆ, ಶರದ್ ಪವಾರ್ ಸರ್ಕಾರವನ್ನು ಮುನ್ನಡೆಸುವಂತೆ ನನನ್ನು ಕೇಳಿದರು. ನನಗೆ ಯಾವುದೇ ಅನುಭವವೂ ಇರಲಿಲ್ಲ. ಆದರೂ ನನ್ನ ಮೇಲೆ ಸೋನಿಯಾ ಗಾಂಧಿ, ಶರದ್ ಪವಾರ್ ನಂಬಿಕೆ ಇಟ್ಟಿದ್ದರು. ಆದರ ನನ್ನವರೇ ನನ್ನ ಮೇಲೆ ನಂಬಿಕೆ ಇಡಲಿಲ್ಲ ಎಂದು ಠಾಕ್ರೆ ಬೇಸರ ವ್ಯಕ್ತಪಡಿಸಿದ್ದರು.