ಅಹಮದಾಬಾದ್/ದೆಹಲಿ: ಗುಜರಾತ್ನ ಆಮ್ ಆದ್ಮಿ ಪಕ್ಷದ ಸೂರತ್ ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬುಧವಾರ ನಾಮಪತ್ರ ಹಿಂಪಡೆದಿದ್ದು, ಬಿಜೆಪಿಯ ಒತ್ತಾಯದ ಮೇರೆಗೆ ಅವರನ್ನು ಅಪಹರಿಸಿ ಒತ್ತಡ ಹೇರಲಾಗಿದೆ ಎಂದು ಎಎಪಿ ಆರೋಪಿಸಿದೆ. ಆದರೆ ಇದನ್ನು ಆಡಳಿತ ಪಕ್ಷ ನಿರಾಕರಿಸಿದೆ.
ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರು ಯಾವುದೇ ಒತ್ತಡವಿಲ್ಲದೆ ನಾಮಪತ್ರ ಹಿಂಪಡೆದಿದ್ದಾರೆ ಎಂದು ಹೇಳಲಾದ ವೀಡಿಯೊ ಹೇಳಿಕೆಯನ್ನು ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಲಾಗಿದೆ.
ಕ್ಷೇತ್ರದ ಜನ ನನ್ನನ್ನು "ದೇಶ ವಿರೋಧಿ" ಮತ್ತು "ಗುಜರಾತ್ ವಿರೋಧಿ" ಎಂದು ಆರೋಪಿಸಿದ ನಂತರ ನನ್ನ ಆತ್ಮಸಾಕ್ಷಿಯಂತೆ ನಾನು ನಡೆದುಕೊಂಡಿದ್ದೇನೆ. ಎಎಪಿಯಿಂದ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲಿಸುವುದಿಲ್ಲ ಎಂದು ಕ್ಷೇತ್ರದ ಜನ ಬೆದರಿಕೆ ಹಾಕಿದರು ಎಂದು ಕಾಂಚನ್ ಜರಿವಾಲಾ ಹೇಳಿದ್ದಾರೆ.
ಇದನ್ನು ಓದಿ: ಗುಜರಾತ್'ನಲ್ಲಿ ರಾಜಕೀಯ ಹೈಡ್ರಾಮಾ: ಎಎಪಿ ಅಭ್ಯರ್ಥಿಯಿಂದ ನಾಮಪತ್ರ ವಾಪಸ್; ಬಿಜೆಪಿ 'ಅಪಹರಿಸಿತ್ತು' ಎಂದು ಆಪ್ ಆರೋಪ
ಎಎಪಿ ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ಪಿ ಭಾರತಿ ಅವರಿಗೆ ಈ ವಿಷಯದ ಬಗ್ಗೆ ಪತ್ರ ಬರೆದಿದ್ದು, ಇಡೀ ಘಟನೆಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಈ ಬೆಳವಣಿಗೆಯ ನಡುವೆ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಸ್ಲಾಮ್ ಸೈಕಲ್ವಾಲಾ ಅವರು ಎಎಪಿ ಬೆಂಬಲವನ್ನು ಕೋರಿ ಬಹಿರಂಗ ಪತ್ರ ಬರೆದಿದ್ದಾರೆ.