ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ವರ್ಸಸ್ ಶವಸೇನೆ ಸಮರ ದಿನೇ ದಿನೇ ಜೋರಾಗ್ತಿದೆ. ಶಿವಸೇನೆಯಲ್ಲಿನ ಬಣ ರಾಜಕೀಯ ಘರ್ಷಣೆಯ ರೂಪ ಪಡೆಯುತ್ತಿದೆ. ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಬೆಂಬಲಿಗರು ಮಂಗಳವಾರ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಾರ್ಯಕ್ರಮದ ಆ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿ ಪ್ರದಕ್ಷಿಣೆ ಹಾಕಿದ್ದಾರೆ.
ಇದನ್ನು ಓದಿ: ಸೇನಾ vs ಸೇನಾ: ವಿಧಾನ ಪರಿಷತ್ ಗೆ ಠಾಕ್ರೆ ಶಿಫಾರಸು ಮಾಡಿದ್ದ 12 ಹೆಸರುಗಳನ್ನು ಹಿಪಂಡೆಯುವಂತೆ ಶಿಂಧೆ ಪತ್ರ
ಬಿಡ್ಕಿನ್ ನಲ್ಲಿ ನಡೆದಿರೋ ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಂಬೆ ಎಲೆಗಳನ್ನು ಬಳಸಿ ಪುರುಷರ ಗುಂಪು ಗೋಮೂತ್ರ ಸಿಂಪಡಿಸಿದೆ. “50 ಖೋಖೆ, ಏಕ್ ದಮ್ ಓಕೆ” ಎಂಬ ಘೋಷಣೆಯನ್ನು ಕೂಗಿದ ಅವರು ಶಿಂಧೆ ಪಾಳಯದಲ್ಲಿರುವ ಶಾಸಕರು ತಲಾ 50 ಕೋಟಿ ರೂ. ಆಫರ್ ಪಡೆದ ನಂತರ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದರು ಎಂದು ಠಾಕ್ರೆ ಬೆಂಬಲಿಗರು ಆರೋಪಿಸಿದ್ದಾರೆ. ಆದರೆ ಈ ಪ್ರತಿಭಟನೆಗೆ ಶಿಂಧೆ ಪಾಳಯ ಇನ್ನೂ ಸ್ಪಂದಿಸಿಲ್ಲ.
ಸೇನೆಯ ಎರಡು ಬಣಗಳ ನಡುವೆ ಆಗಾಗ್ಗೆ ಘರ್ಷಣೆಗಳು ನಡೆಯುತ್ತಿದ್ದು, ಇತ್ತೀಚಿಗೆ ಗಣೇಶ ಮೂರ್ತಿ ವಿಸರ್ಜನೆ ಘರ್ಷಣೆ ಬಳಿಕ ಈ ಪ್ರಕರಣ ಜರುಗಿದೆ. ಶಿಂಧೆ ನೇತೃತ್ವದ ಬಂಡಾಯವು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಿದಾಗಿನಿಂದ ಶಿವಸೇನೆ ಬಣ ರಾಜಕೀಯ ತೀವ್ರಗೊಂಡಿದೆ.
ಮುಂಬೈನ ದಾದರ್ನಲ್ಲಿ ಶನಿವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಎರಡು ಬಣಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ಎರಡೂ ಕಡೆಯವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡರು. ಎರಡು ಕಡೆಯವರು ಮೊದಲು ಪ್ರಭಾದೇವಿಯಲ್ಲಿ ಮತ್ತು ನಂತರ ದಾದರ್ ಪೊಲೀಸ್ ಠಾಣೆಯ ಹೊರಗೆ ಘರ್ಷಣೆ ನಡೆಸಿದರು. ದಾದರ್ನಲ್ಲಿ ನಡೆದ ಘರ್ಷಣೆಯಲ್ಲಿ ಶಿಂಧೆ ಪಾಳೆಯದ ಶಿವಸೇನಾ ಶಾಸಕ ಸದಾ ಸರ್ವಾಂಕರ್ ಗುಂಡು ಹಾರಿಸಿದ ಆರೋಪ ಹೊರಿಸಲಾಗಿದೆ. ಘರ್ಷಣೆಗೆ ಸಂಬಂಧಿಸಿದಂತೆ ಠಾಕ್ರೆ ಶಿಬಿರದ ಐವರು ಸೇನಾ ಕಾರ್ಯಕರ್ತರನ್ನು ಬಂಧಿಸಲಾಯಿತು. ಆದರೆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಎರಡೂ ಕಡೆಯ ಕನಿಷ್ಠ 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.