ಉತ್ತರಾಖಂಡದಲ್ಲಿ ಪ್ರವಾಹದಿಂದ ಕುಸಿದ ಸೇನಾ ತರಬೇತಿ ಅಕಾಡೆಮಿ 
ದೇಶ

ಉತ್ತರಾಖಂಡದಲ್ಲೂ ಮಳೆ ರೌದ್ರಾವತಾರ: ಸೇನಾ ತರಬೇತಿ ಅಕಾಡೆಮಿ ಕಟ್ಟಡ ಕುಸಿತ

ಹಿಮಾಚಲಪ್ರದೇಶದ ಬೆನ್ನಲ್ಲೇ ಉತ್ತರಾಖಂಡದಲ್ಲೂ ಮಳೆ ರೌದ್ರಾವತಾರ ಮುಂದುವರೆದಿದ್ದು, ಭೀಕರ ಪ್ರವಾಹದಿಂದಾಗಿ ಉತ್ತರಾಖಂಡದಲ್ಲಿರುವ ಪ್ರಮುಖ ಸೇನಾ ತರಬೇತಿ ಅಕಾಡೆಮಿ ಕಟ್ಟಡ ಕುಸಿದು ನೀರುಪಾಲಾಗಿದೆ.

ಡೆಹ್ರಾಡೂನ್: ಹಿಮಾಚಲಪ್ರದೇಶದ ಬೆನ್ನಲ್ಲೇ ಉತ್ತರಾಖಂಡದಲ್ಲೂ ಮಳೆ ರೌದ್ರಾವತಾರ ಮುಂದುವರೆದಿದ್ದು, ಭೀಕರ ಪ್ರವಾಹದಿಂದಾಗಿ ಉತ್ತರಾಖಂಡದಲ್ಲಿರುವ ಪ್ರಮುಖ ಸೇನಾ ತರಬೇತಿ ಅಕಾಡೆಮಿ ಕಟ್ಟಡ ಕುಸಿದು ನೀರುಪಾಲಾಗಿದೆ.

ಧಾರಾಕಾರ ಮಳೆಯಿಂದಾಗಿ ಡೆಹ್ರಾಡೂನ್ ಹೊರವಲಯದಲ್ಲಿರುವ ರಕ್ಷಣಾ ತರಬೇತಿ ಅಕಾಡೆಮಿ ಸೋಮವಾರ ಕುಸಿದು ಬಿದ್ದಿದ್ದು, ಬದರಿನಾಥ್, ಕೇದಾರನಾಥ್ ಮತ್ತು ಗಂಗೋತ್ರಿ ದೇಗುಲಗಳಿಗೆ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಸರಣಿ ಭೂಕುಸಿತದ ನಂತರ ಐವರು ನಾಪತ್ತೆಯಾಗಿದ್ದಾರೆ. ಲಾಲ್ಪುಲ್ ಬಳಿಯ ಸಾಂಗ್ ನದಿಯ ದಡದಲ್ಲಿ ನೆಲೆಗೊಂಡಿರುವ ಡೆಹ್ರಾಡೂನ್ ಡಿಫೆನ್ಸ್ ಅಕಾಡೆಮಿಯ ಕಟ್ಟಡವು ಸೋಮವಾರ ಬೆಳಿಗ್ಗೆ ಕುಸಿದಿದೆ ಎಂದು ತೆಹ್ರಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಶಿಶ್ ಗಿಲ್ಡಿಯಾಲ್ ತಿಳಿಸಿದ್ದಾರೆ.

ಅಪಾಯವನ್ನರಿತು ಕಟ್ಟಡವನ್ನು ಮೊದಲೇ ತೆರವು ಮಾಡಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ. ಇದು ಖಾಸಗಿ ಸಂಸ್ಥೆಯಾಗಿದ್ದು, ಈ ಕಟ್ಟಡವನ್ನು 15 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಮಳೆ ಮತ್ತು ಪ್ರವಾಹದಿಂದಾಗಿ ಕಟ್ಟಡದ ಅಡಿಪಾಯ ಹಾನಿಗೀಡಾಗಿತ್ತು. ಹೀಗಾಗಿ ಮೊದಲೇ ಅಧಿಕಾರಿಗಳು ಕಟ್ಟಡವನ್ನುತೆರವು ಮಾಡಿಸಿದ್ದರು. ಇದೀಗ ಕಟ್ಟಡ ಕುಸಿದು ನೀರುಪಾಲಾಗಿದೆ  ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಖಿಲೇಶ್ ಉನಿಯಾಲ್ ಹೇಳಿದರು.

ಇನ್ನು ನಿರಂತರ ಮಳೆಯಿಂದಾಗಿ ರಾಜ್ಯದ ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಪೌರಿ ಜಿಲ್ಲೆಯ ಲಕ್ಷ್ಮಂಜುಲಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ನಾಲ್ಕೈದು ಮಂದಿ ನಾಪತ್ತೆಯಾಗಿದ್ದಾರೆ. ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಈ ಪ್ರದೇಶದ ರೆಸಾರ್ಟ್‌ನಲ್ಲಿ ಅವಶೇಷಗಳು ಬಿದ್ದಿದ್ದು, ನಾಲ್ಕು-ಐದು ಜನರು ಅದರ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ತಲುಪಿದ್ದು, ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೌರಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ವೇತಾ ಚೌಬೆ ದೂರವಾಣಿಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಕುರಿತು ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದು, ಪೌರಿಯಲ್ಲಿ ಭಾರೀ ಮಳೆಯಿಂದಾಗಿ ಭಾರೀ ಸಾವುನೋವುಗಳು ವರದಿಯಾಗಿವೆ, ಇದು ಅತ್ಯಂತ ದುಃಖಕರವಾಗಿದೆ. ರಾಜ್ಯದಲ್ಲಿನ ಮಳೆ ಪರಿಸ್ಥಿತಿಯನ್ನು ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಹಗಲು-ರಾತ್ರಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಗಂಗಾನದಿ
ತೆಹ್ರಿ, ಹರಿದ್ವಾರ ಮತ್ತು ಋಷಿಕೇಶದಲ್ಲಿ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಳೆಯಿಂದಾಗಿ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ರುದ್ರಪ್ರಯಾಗ, ಶ್ರೀನಗರ ಮತ್ತು ದೇವಪ್ರಯಾಗದಲ್ಲಿ ಅಲಕನಂದಾ, ಮಂದಾಕಿನಿ ಮತ್ತು ಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಇಲ್ಲಿನ ವಿಪತ್ತು ನಿಯಂತ್ರಣ ಕೊಠಡಿ ತಿಳಿಸಿದೆ. ಭೂಕುಸಿತದಿಂದಾಗಿ ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಹಲವಾರು ಸ್ಥಳಗಳಲ್ಲಿ ಸ್ಥಗಿತಗೊಂಡಿದೆ. ಪಿಪ್ಪಲಕೋಟಿ ಬಳಿ ಒಬ್ಬ ವ್ಯಕ್ತಿ ಅವಶೇಷಗಳಡಿಯಲ್ಲಿ ಹೂತುಹೋಗಿರುವ ಬಗ್ಗೆಯೂ ಮಾಹಿತಿ ಇದೆ.

ಚಮೋಲಿ ಜಿಲ್ಲೆಯಲ್ಲಿ ಅಲಕನಂದಾ ಮತ್ತು ಅದರ ಉಪನದಿಗಳಾದ ಪಿಂಡಾರ್, ನಂದಾಕಿನಿ ಮತ್ತು ಬಿರ್ಹಿ ಸೇರಿದಂತೆ ಹತ್ತಾರು ನದಿಗಳ ತೀರದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಿಂಡಾರಿನ ಉಪನದಿ ಪ್ರಣ್ಮತಿ ಕೂಡ ಭೂಕುಸಿತದಿಂದ ಜಲಾವೃತಗೊಂಡಿದೆ. ನಂದಾಕಿನಿ ನದಿಯ ಮೇಲ್ಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ನದಿಯ ಕೆಳಭಾಗದಲ್ಲಿ ನೀರಿನ ಮಟ್ಟ ಹೆಚ್ಚಿದೆ. ಬದರಿನಾಥ ರಾಷ್ಟ್ರೀಯ ಹೆದ್ದಾರಿಯ ಪಿಪಾಲಕೋಟಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕುಸಿತದಿಂದ ಜೀವಹಾನಿ ವರದಿಯಾಗಿದೆ. ರಿಷಿಕೇಶದಲ್ಲಿ ಗಂಗಾ ನದಿ ಅಪಾಯದ ಅಂಚಿನಲ್ಲಿ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗದ ಕಿರಿಯ ಎಂಜಿನಿಯರ್ ಸನ್ನಿ ವಿಷ್ಣೋಯ್ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಋಷಿಕೇಶದಲ್ಲಿ 435 ಮಿಮೀ ಮಳೆಯನ್ನು ದಾಖಲಿಸಿದೆ ಎಂದು ಕೇಂದ್ರ ಜಲ ಆಯೋಗವು ಮಾಹಿತಿ ನೀಡಿದ್ದು, ಭಾರೀ ಮಳೆಯಿಂದಾಗಿ ಚಂದ್ರೇಶ್ವರ ನಗರ ಮತ್ತು ಶೀಶಮ್ ಜಾರಿ ಸೇರಿದಂತೆ ಋಷಿಕೇಶದ ವಿವಿಧ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದರೊಂದಿಗೆ ರಿಷಿಕೇಶ ಸಮೀಪದ ಗ್ರಾಮೀಣ ಪ್ರದೇಶಗಳು ಜಲಾವೃತಗೊಂಡಿವೆ.

ಹವಾಮಾನ ಇಲಾಖೆಯು ಡೆಹ್ರಾಡೂನ್, ತೆಹ್ರಿ, ಪೌರಿ, ಉಧಮ್ ಸಿಂಗ್ ನಗರ, ನೈನಿತಾಲ್ ಮತ್ತು ಚಂಪಾವತ್ ಸೇರಿದಂತೆ ಉತ್ತರಾಖಂಡದ ಆರು ಜಿಲ್ಲೆಗಳಲ್ಲಿ ಸೋಮವಾರ ರೆಡ್ ಅಲರ್ಟ್ ಘೋಷಿಸಿದೆ ಮತ್ತು ಹರಿದ್ವಾರದಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಇಲ್ಲಿ ಆರೆಂಜ್ ಅಲರ್ಟ್ ನೀಡಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT