ದೇಶ

ಆಂಧ್ರ ಪ್ರದೇಶ: ಬಂಡೆಕಲ್ಲಿನ ಕೆಳಗೆ ವಿಜಯನಗರ ಸಾಮ್ರಾಜ್ಯ ಕಾಲದ 450 ಚಿನ್ನದ ನಾಣ್ಯಗಳು ಪತ್ತೆ!

Ramyashree GN

ತಿರುಪತಿ: ನೆಲ್ಲೂರು ಜಿಲ್ಲೆಯ ಚಿಟ್ಟೆಪಲ್ಲಿ ಗ್ರಾಮದ ಅಂಕಾಳಮ್ಮ ದೇವಸ್ಥಾನದ ಬಳಿಯ ಗುಡ್ಡದ ಮೇಲಿನ ಬಂಡೆಕಲ್ಲಿನ ಕೆಳಗೆ ಬುಧವಾರ 450ಕ್ಕೂ ಹೆಚ್ಚು ಚಿನ್ನದ ನಾಣ್ಯಗಳು ಪತ್ತೆಯಾಗಿವೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ನಿರ್ದೇಶಕ ಕೆ ಮುನಿರತ್ನಂ ರೆಡ್ಡಿ ಮಾತನಾಡಿ, ಇವು 15 ಮತ್ತು 17ನೇ ಶತಮಾನಗಳ ಚಿನ್ನದ ನಾಣ್ಯಗಳಾಗಿದ್ದು, ವಿಜಯನಗರ ಸಾಮ್ರಾಜ್ಯದ ರಾಜ ಹರಿಹರ I ಮತ್ತು II ಮತ್ತು ದೆಹಲಿ ಸುಲ್ತಾನರಿಗೆ ಸೇರಿದವುಗಳಾಗಿವೆ ಎಂದು ಹೇಳಿದರು.

ಕೆಲವು ಚಿನ್ನದ ನಾಣ್ಯಗಳ ಅಂಚಿನಲ್ಲಿ ದೆಹಲಿ ಟಂಕಸಾಲೆಯ ಚಿತ್ರಣವಿದೆ. ಈ ನಾಣ್ಯಗಳು ಈ ಪ್ರದೇಶದ ಅತ್ಯಂತ ಹಳೆಯ ದೇಗುಲಗಳಲ್ಲಿ ಒಂದಾದ ಅಂಕಾಳಮ್ಮ ದೇವಾಲಯದ ಬಳಿ ಕಂಡುಬಂದಿವೆ ಎಂದು ಅವರು ಹೇಳಿದರು. 

ಮಧ್ಯಕಾಲೀನ ಕಾಲದಲ್ಲಿ, ಸರಿಯಾದ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಜನರು ತಮ್ಮ ಹಣವನ್ನು ದೇವಸ್ಥಾನಗಳಲ್ಲಿ ಠೇವಣಿ ಇಡುತ್ತಿದ್ದರು. ಆಂಧ್ರ ಪ್ರದೇಶದ ರಾಜ್ಯ ಪುರಾತತ್ವ ಇಲಾಖೆ ಇನ್ನೂ ಚಿನ್ನದ ನಾಣ್ಯಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.

ಸದ್ಯ ದೊರಕಿರುವ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಚಿನ್ನದ ನಾಣ್ಯಗಳನ್ನು ಸಂರಕ್ಷಿಸುವಂತೆ ತಿರುಪತಿಯ ಸಂಸದರನ್ನು ಮುನಿರತ್ನಂ ಒತ್ತಾಯಿಸಿದ್ದಾರೆ. ಇವುಗಳನ್ನು ಹೊಸ ಎಎಸ್‌ಐ ಮ್ಯೂಸಿಯಂನಲ್ಲಿ ಪ್ರದರ್ಶಿಸುವ ಸಾಧ್ಯತೆ ಇದೆ.

SCROLL FOR NEXT