ಜೈಪುರ: ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತವು ತಕ್ಷಣದಿಂದ ಜಾರಿಗೆ ಬರುವಂತೆ ಕೋಚಿಂಗ್ ಸೆಂಟರ್ಗಳಲ್ಲಿ ಎರಡು ತಿಂಗಳ ಕಾಲ ಎಲ್ಲ ರೀತಿಯ ಟೆಸ್ಟ್ ಪರೀಕ್ಷೆಗಳನ್ನು ನಿಲ್ಲಿಸಲು ನಿರ್ದೇಶನ ನೀಡಿದೆ.
ಕೋಟಾ ಜಿಲ್ಲಾಡಳಿತವು ಮಾನಸಿಕ ಬೆಂಬಲದ ಅಗತ್ಯವನ್ನು ಉಲ್ಲೇಖಿಸಿ ಎರಡು ತಿಂಗಳ ಕಾಲ ಪರೀಕ್ಷೆಗಳನ್ನು ತಡೆಹಿಡಿದಿದೆ. "ಅಧ್ಯಯನ/ವಸತಿ ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಭದ್ರತೆಯನ್ನು ಒದಗಿಸುವ ಸಲುವಾಗಿ, ಕೋಟಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೋಚಿಂಗ್ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ನಡೆಸಲಾಗುವ ಪರೀಕ್ಷೆಗಳನ್ನು ಮುಂದಿನ ಎರಡು ತಿಂಗಳುಗಳ ಕಾಲ ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಪ್ರತಿ ಸೀಲಿಂಗ್ ಫ್ಯಾನ್ಗೆ ಆತ್ಮಹತ್ಯೆ ತಡೆ ಸಾಧನ ಅಳವಡಿಕೆ!
ಭಾನುವಾರ ಜಿಲ್ಲಾಡಳಿತದಿಂದ ಈ ಬಗ್ಗೆ ಆದೇಶ ಕೂಡ ಬಿಡುಗಡೆ ಮಾಡಲಾಗಿದೆ. NEET (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಆಕಾಂಕ್ಷಿಯೊಬ್ಬರು ಭಾನುವಾರ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಆದೇಶವು ಹೊರಬಂದಿದ್ದು, ಇದು 23ನೇ ಆತ್ಮಹತ್ಯೆ ಪ್ರಕರಣವಾಗಿದೆ.
ಪೊಲೀಸರ ಪ್ರಕಾರ, ಪದವಿಪೂರ್ವ ವೈದ್ಯಕೀಯ ಕೋರ್ಸ್ಗೆ ಪ್ರವೇಶಕ್ಕಾಗಿ ನೀಟ್ಗೆ ತಯಾರಿ ನಡೆಸುತ್ತಿದ್ದ 16 ವರ್ಷದ ವಿದ್ಯಾರ್ಥಿ ಭಾನುವಾರ ಕೋಟಾದ ಕೋಚಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾರಾಷ್ಟ್ರ ಮೂಲದ ಆವಿಷ್ಕರ್ ಎಂಬ ವಿದ್ಯಾರ್ಥಿ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾನೆ.
"ಅವನು 16 ವರ್ಷ ವಯಸ್ಸಿನವನಾಗಿದ್ದನು ಮತ್ತು NEET ಗೆ ತಯಾರಿ ನಡೆಸುತ್ತಿದ್ದು, ಆತ 12ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಮತ್ತು ಅವನ ತಾಯಿಯ ಅಜ್ಜಿಯೊಂದಿಗೆ ವಾಸಿಸುತ್ತಿದ್ದನು. ಅವನು ತರಬೇತಿ ಸಂಸ್ಥೆಯ 6ನೇ ಮಹಡಿಯಿಂದ (ಅವನ ) ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾವು ಅವನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಕೋಟಾದ ಉಪ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ನಿಗದಿತ ಸಾಪ್ತಾಹಿಕ ಪರೀಕ್ಷೆಗೆ ಹಾಜರಾಗಿದ್ದ 16ರ ಹರೆಯದ ಯುವಕ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
"ಪರೀಕ್ಷಾ ಕೊಠಡಿಯಿಂದ ಹೊರಬಂದ ಕೇವಲ ಐದು ನಿಮಿಷಗಳ ನಂತರ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶವವನ್ನು ಜಿಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಮತ್ತು ಮಾದರಿಗಳನ್ನು ಸಂಗ್ರಹಿಸಲು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅವರ ಪೋಷಕರು ಸಹ ಇದ್ದರು. ಅವರ ಸಾವಿನ ಬಗ್ಗೆ ಮಾಹಿತಿ ನೀಡಿದರು ಎಂದು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಕೋಟಾ: ಜೆಇಇ ಆಕಾಂಕ್ಷಿ ಆತ್ಮಹತ್ಯೆಗೆ ಶರಣು, ಇದು ಈ ತಿಂಗಳು ಕೋಚಿಂಗ್ ಹಬ್ನಲ್ಲಿ ನಡೆದ 3ನೇ ಆತ್ಮಹತ್ಯೆ!
ಈ ತಿಂಗಳ ಆರಂಭದಲ್ಲಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ತನಿಖೆಗಾಗಿ ಸಮಿತಿಯನ್ನು ರಚಿಸಿದ್ದರು, ಅದರ ವರದಿಯನ್ನು ಶೀಘ್ರವಾಗಿ ಸಲ್ಲಿಸುವಂತೆ ಕೇಳಿದರು.