ಜಲ್ನಾ: ನಾನು ಮತ್ತು ಇತರ ಬಂಡಾಯ ಶಿವಸೇನೆ ಶಾಸಕರು ಗುವಾಹಟಿಯ ಹೋಟೆಲ್ನಲ್ಲಿ ಮೊಕ್ಕಾಂ ಹೂಡಿದ್ದಾಗ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಆಶೀರ್ವಾದ ಮಾಡಿದ್ದರು ಮತ್ತು ಬಂಡಾಯದಲ್ಲಿ ನಾನು ಯಶಸ್ವಿಯಾಗುತ್ತೇನೆ ಎಂದು ಹೇಳಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಗುರುವಾರ ತಿಳಿಸಿದ್ದಾರೆ.
ಮಧ್ಯ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ವಾತೂರ್ ಗ್ರಾಮದಲ್ಲಿ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಶಿಂಧೆ ಮಾತನಾಡಿದರು. ವೇದಿಕೆಯಲ್ಲಿ ಆಧ್ಯಾತ್ಮಿಕ ಚಿಂತಕರು ಉಪಸ್ಥಿತರಿದ್ದರು.
ಇದನ್ನು ಓದಿ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ವಿಧಾನಸಭೆಯಲ್ಲಿ ಸಿಎಂ ಏಕನಾಥ್ ಶಿಂಧೆ ನಿರ್ಣಯ ಮಂಡನೆ, ಸರ್ವಾನುಮತದ ಅಂಗೀಕಾರ
ಶಿಂಧೆ ತಮ್ಮ ಭಾಷಣದಲ್ಲಿ, "ನಿಮಗೆ ಒಂದು ವಿಷಯ ಹೇಳುತ್ತೇನೆ. ನಾವು ಗುವಾಹಟಿಯಲ್ಲಿದ್ದಾಗ ರವಿಶಂಕರ್ ಗುರೂಜಿ ನಮಗೆ ಆಶೀರ್ವಾದ ಮಾಡಿದ್ದರು ಮತ್ತು ಅವರು ಒಳ್ಳೆಯ ಕೆಲಸವನ್ನು ಬೆಂಬಲಿಸುತ್ತಾರೆ ಎಂದು" ಹೇಳಿದರು.
ಸಿಎಂ ಗುವಾಹಟಿಯ ವಿಚಾರ ಸಭಿಕರಲ್ಲಿ ನಗುವನ್ನು ತರಿಸಿತು. ಆದರೂ ಮಾತು ಮುಂದುವರೆಸಿದ ಶಿಂಧೆ, "ಆಗ ಗುರುದೇವ್-ಜಿ ನನಗೆ ಫೋನ್ ಮೂಲಕ ಆಶೀರ್ವಾದವನ್ನು ನೀಡಿದ್ದರು. ನಾವು ಹೋರಾಟ ಪ್ರಾರಂಭಿಸಿದ್ದೇವೆ ಎಂದು ಅವರಿಗೆ ಹೇಳಿದೆ. ಅವರು ತುಂಬಾ ಒಳ್ಳೆಯದು. ಒಳ್ಳೆಯ ಕೆಲಸವನ್ನು ಮಾಡುತ್ತಾ ಇರಿ, ನೀವು ಯಶಸ್ವಿಯಾಗುತ್ತೀರಿ ಎಂದರು. ಗುರುದೇವ್-ಜಿ ಒಳ್ಳೆಯ ಕೆಲಸ ಮಾಡುವವರನ್ನು ಬೆಂಬಲಿಸುತ್ತಾರೆ" ಎಂದು ಸಿಎಂ ಹೇಳಿದರು.
ಶಿಂಧೆ ಮತ್ತು ಶಿವಸೇನೆಯ ಬಹುಪಾಲು ಶಾಸಕರು ಜೂನ್ 2022 ರಲ್ಲಿ ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯವೆದ್ದು ಗುವಾಹಟಿಯ ಹೋಟೆಲ್ನಲ್ಲಿ ಮೊಕ್ಕಾಂ ಹೂಡಿದ್ದರು.
ಬಂಡಾಯ ಶಾಸಕರು ಮುಂಬೈನಿಂದ 2,000 ಕಿಮೀ ದೂರದಲ್ಲಿರುವ ಗುವಾಹಟಿಯ ಹೋಟೆಲ್ನಲ್ಲಿ ಒಂದು ವಾರದವರೆಗೆ ತಂಗಿದ್ದರು. ಈ ಬಂಡಾಯ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾಯಿತು. ನಂತರ ಶಿಂಧೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಿದರು.