ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ನಲ್ಲಿ ಆಂತರಿಕ ಸಂಘರ್ಷ ಭುಗಿಲೆದಿದ್ದು, ನಿನ್ನೆಯಷ್ಟೇ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಪತ್ರ ಬರೆದಿದ್ದ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಬಾಳಾಸಾಹೇಬ್ ಥೋರಟ್ ಇಂದು ದಿಢೀರ್ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರ ನಾಯಕತ್ವದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ಬಹಿರಂದವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೆಸಿಆರ್ ರ್ಯಾಲಿ: ಕೇಂದ್ರದಲ್ಲಿ ರೈತರ ಸರ್ಕಾರ ರಚಿಸುವುದಾಗಿ ಶಿವನೇರಿಯಲ್ಲಿ ಪ್ರತಿಜ್ಞೆ
ಅಂತೆಯೇ ಇದೇ ವಿಚಾರವಾಗಿ ಈ ಹಿಂದೆ ಪತ್ರವೊಂದನ್ನು ಕೂಡ ಬರೆದಿದ್ದ ಥೋರಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರಿಂದ ತನಗೆ ಅವಮಾನವಾಗಿದೆ. ಅವರೊಂದಿಗೆ(ಪಟೋಲೆ), ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿದ್ದ ಪತ್ರದಲ್ಲಿ ಬರೆದಿದ್ದಾರೆ. ಪತ್ರದ ಜತೆಗೆ ರಾಜೀನಾಮೆ ಪತ್ರವನ್ನೂ ಕಳುಹಿಸಿದ್ದಾರೆ ಎನ್ನಲಾಗಿದೆ.
ಥೋರಟ್ ಅವರು ದೃಢ ನಿಲುವು ತಾಳಿದ್ದು, ತಮ್ಮ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ಥೋರಟ್ ಅವರು ಫೆಬ್ರವರಿ 2 ರಂದು ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ ನಾನಾ ಪಟೋಲೆ ಅವರೊಂದಿಗೆ ಕೆಲಸ ಮಾಡುವುದು ಅ ವರಿಗೆ ಕಷ್ಟಕರವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.