ಮುಜಾಫರ್ಪುರ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ಮಾಡಿದ ಭಾಷಣದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಮಂಗಳವಾರ ಬಿಹಾರ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ಮುಂಬೈನಲ್ಲಿ ಭಾನುವಾರ ನಡೆದ ಸಮಾರಂಭವೊಂದಲ್ಲಿ ಭಾಗವಹಿಸಿದ್ದ ಭಾಗವತ್ ಅವರ ಭಾಷಣದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವಕೀಲ ಸುಧೀರ್ ಕುಮಾರ್ ಓಜಾ ಅವರು ಮುಜಾಫರ್ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮರಾಠಿಯಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಮೋಹನ್ ಭಾಗವತ್ ಅವರು, ಹಿಂದೂ ಸಮಾಜದಲ್ಲಿ ಚಾಲ್ತಿಯಲ್ಲಿರುವ ಕಠಿಣ ಜಾತಿ ಶ್ರೇಣಿ ಸೃಷ್ಠಿಯಾಗಿರುವುದು ಪುರೋಹಿತರಿಂದ, ಜಾತಿಗಳು ಸೃಷ್ಟಿಯಾಗಿರುವುದು ದೇವರಿಂದಲ್ಲ ಎಂದು ಹೇಳಿದ್ದರು.
ಪುರೋಹಿತಶಾಹಿಯೊಂದಿಗೆ ಸಂಬಂಧ ಹೊಂದಿರುವ 'ಬ್ರಾಹ್ಮಣರ' ಬಗ್ಗೆ ಭಾಗವತ್ ಮಾತನಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ದೇವರ ಪಾಲಿಗೆ ಎಲ್ಲರೂ ಒಂದೇ, ಜಾತಿಗಳನ್ನು ಸೃಷ್ಟಿಸಿರುವುದು ಪುರೋಹಿತರೇ ಹೊರತು ದೇವರಲ್ಲ: ಮೋಹನ್ ಭಾಗವತ್
ಬಿಜೆಪಿಯ ಮಾತೃಸಂಸ್ಥೆಯಾದ ಆರ್ಎಸ್ಎಸ್, ಭಾಗವತ್ ಅವರು ಯಾವುದೇ ನಿರ್ದಿಷ್ಟ ಜಾತಿಯನ್ನು ಉಲ್ಲೇಖಿಸಿಲ್ಲ ಮತ್ತು ಪುರೋಹಿತರು ಎಂಬ ಪದದಿಂದ ಅವರು ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದ ಹಿಂದಿನ ವಿದ್ವಾಂಸರನ್ನು ಸೂಚಿಸಿದ್ದಾರೆ ಎಂದು ಹೇಳಿಕೆ ನೀಡಿದೆ.
ಅದೇನೇ ಇದ್ದರೂ, ಎಲ್ಲಾ ಸೆಲೆಬ್ರಿಟಿಗಳ ವಿರುದ್ಧದ ಅರ್ಜಿಗಳಿಗಾಗಿ ಸುದ್ದಿಯಲ್ಲಿರುವ ಸರಣಿ ವ್ಯಾಜ್ಯಗಾರ ಓಜಾ, ಧಾರ್ಮಿಕ ಭಾವನೆಗಳಿಗೆ ಉಂಟಾದ ನೋವು ಮತ್ತು ಸಾರ್ವಜನಿಕ ಶಾಂತಿ ಉಲ್ಲಂಘನೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಭಾಗವತ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಮನವಿ ಮಾಡಿದ್ದಾರೆ.
ಕುತೂಹಲಕಾರಿಯಾಗಿ, ಓಜಾ ಅವರು ಭಾಗವತ್ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಆರ್ಎಸ್ಎಸ್ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ನ ಮುಖ್ಯಸ್ಥ ಎಂದು ಕರೆದಿದ್ದಾರೆ.
ನ್ಯಾಯಾಲಯವು ಫೆಬ್ರುವರಿ 20 ರಂದು ವಿಚಾರಣೆಯನ್ನು ಕೈಗೊಳ್ಳಲಿದೆ.