ದೇಶ

ಬಿಜೆಪಿ, ಆರ್‌ಎಸ್‌ಎಸ್‌ ದೇಶದಲ್ಲಿ ದ್ವೇಷ, ಭಯದ ವಾತಾವರಣ ಸೃಷ್ಟಿಸಿವೆ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ

Ramyashree GN

ಪಠಾಣ್‌ಕೋಟ್‌: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ದ್ವೇಷ, ಹಿಂಸಾಚಾರ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಪಂಜಾಬ್‌ನ ಕೊನೆಯ ದಿನದಂದು ಇಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮ, ಒಂದು ಜಾತಿಯ ವಿರುದ್ಧ ಮತ್ತೊಂದು ಜಾತಿ ಮತ್ತು ಒಂದು ಭಾಷೆಯ ವಿರುದ್ಧ ಮತ್ತೊಂದು ಭಾಷೆಯು ಹೋರಾಡುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.

ಅವರು ಭಯವನ್ನು ಸೃಷ್ಟಿಸುತ್ತಿದ್ದಾರೆ. ಅವರ ಎಲ್ಲಾ ನೀತಿಗಳು ಯಾರಿಗಾದರೂ ಅಥವಾ ಯಾವುದೋ ಭಯವನ್ನು ಉಂಟುಮಾಡುತ್ತವೆ ಎಂದು ಅವರು ದೂರಿದರು.

ಹಿಂದಿನ ಯುಪಿಎ ಸರ್ಕಾರವು ನರೇಗಾ, ಕೃಷಿ ಸಾಲ ಮನ್ನಾ, ನಗರ ನವೀಕರಣ ಮಿಷನ್, ಹಸಿರು ಕ್ರಾಂತಿ, ಶ್ವೇತ ಕ್ರಾಂತಿಯನ್ನು ತಂದಿತು. ನಾವು ಏನು ಮಾಡಿದರೂ ಭಯವನ್ನು ತೊಡೆದುಹಾಕಲು ಆಗಿತ್ತು. ಆದರೆ, ಬಿಜೆಪಿ ಏನು ಮಾಡಿದರೂ ಭಯವನ್ನು ಹರಡಲು ಆಗಿರುತ್ತದೆ ಎಂದರು.

ರೈತರು ಬೆಳಗಿನ ಜಾವ 4 ಗಂಟೆಗೆ ಎದ್ದು ಪ್ರತಿನಿತ್ಯ ಕಷ್ಟಪಟ್ಟು ದೇಶಕ್ಕೆ ಆಹಾರ ನೀಡುತ್ತಾರೆ. ರೈತರಿಗೆ ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ, ಅವರಿಗೆ ಗೌರವ ಮಾತ್ರ ಬೇಕು. ಈಗ ರದ್ದಾದ ಮೂರು ಕೃಷಿ ಕಾನೂನುಗಳ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದು ರೈತರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸಿದೆ. ಕೃಷಿ ಕಾನೂನುಗಳನ್ನು ತಂದರು ಈ ಕಾನೂನುಗಳು ರೈತರಲ್ಲಿ ಭಯ ಮೂಡಿಸಿವೆ ಎಂದು ಕಿಡಿಕಾರಿದರು.

ಪ್ರಧಾನ ಮಂತ್ರಿ ಫಸಬ್ ಭೀಮಾ ಯೋಜನೆ ಕುರಿತು ಮಾತನಾಡಿದ ಅವರು, ಹವಾಮಾನ ವೈಪರೀತ್ಯದಿಂದಾಗಿ ರೈತರು ತಮ್ಮ ಬೆಳೆ ಹಾನಿಗೆ ಪರಿಹಾರವನ್ನು ಪಡೆಯುತ್ತಿಲ್ಲ. ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದಾಗ ವಿಮೆ ಪರಿಹಾರ ಸಿಕ್ಕಿದೆ ಎಂದು ಒಬ್ಬ ರೈತ ಕೂಡ ಹೇಳಿಲ್ಲ ಎಂದು ದೂರಿದರು.

ಅಗ್ನಿಪಥ್ ರಕ್ಷಣಾ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ, ಸಶಸ್ತ್ರ ಪಡೆಗೆ ಸೇರಲು ಹಾತೊರೆಯುತ್ತಿದ್ದ ಲಕ್ಷಾಂತರ ಯುವಕರ ಕನಸುಗಳನ್ನು ಇದು ಭಗ್ನಗೊಳಿಸಿದೆ ಎಂದು ಹೇಳಿದರು.

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪ್ರತಿಪಕ್ಷದ ನಾಯಕ ಪರ್ತಾಪ್ ಸಿಂಗ್ ಬಜ್ವಾ, ಸಂಸದರಾದ ಅಮರ್ ಸಿಂಗ್, ಮೊಹಮ್ಮದ್ ಸದ್ದಿಕ್, ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಹರೀಶ್ ಚೌಧರಿ ಸೇರಿದಂತೆ ಇತರರು ರ್ಯಾಲಿಯಲ್ಲಿ ಉಪಸ್ಥಿತರಿದ್ದರು.

SCROLL FOR NEXT