ದೇಶ

35 ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಹಾರಿದ ವಿಮಾನ: ಡಿಜಿಸಿಎಯಿಂದ ತನಿಖೆಗೆ ಆದೇಶ

Srinivasamurthy VN

ನವದೆಹಲಿ: ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಅವಾಂತಗಳು ಹೆಚ್ಚಾಗುತ್ತಿದ್ದು, ಇದೀಗ ವಿಮಾನವೊಂದು ಬರೊಬ್ಬರಿ 35 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಹೋಗಿರುವ ಘಟನೆ ಅಮೃತಸರದಲ್ಲಿ ವರದಿಯಾಗಿದೆ.

ಅಮೃತಸರ–ಸಿಂಗಪುರ ಮಾರ್ಗದ ಸ್ಕೂಟ್ ಏರ್‌ಲೈನ್ಸ್ ವಿಮಾನವು ಬುಧವಾರ 35 ಪ್ರಯಾಣಿಕರನ್ನು ಬಿಟ್ಟು ಟೇಕಾಫ್‌ ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಅಮೃತಸರದಿಂದ ಸಿಂಗಪುರ ಮಾರ್ಗದ ಸ್ಕೂಟ್ ಏರ್‌ಲೈನ್ಸ್ ವಿಮಾನವು ಬುಧವಾರ 35 ಪ್ರಯಾಣಿಕರನ್ನು ಬಿಟ್ಟು ಹೊರಟಿದೆ ಎಂದು ವರದಿಯಾಗಿದೆ. ಅಮೃತಸರ ವಿಮಾನ ನಿಲ್ದಾಣದಿಂದ ವಿಮಾನವು ಬುಧವಾರ ರಾತ್ರಿ 7.55 ಕ್ಕೆ ಹೊರಡಬೇಕಿತ್ತು, ಆದರೆ 35 ಪ್ರಯಾಣಿಕರನ್ನು ಬಿಟ್ಟು 3 ಗಂಟೆಗೆ ಟೇಕ್ ಆಫ್ ಆಗಿತ್ತು. ಘಟನೆಗೆ ಕಾರಣ ತಿಳಿದುಬಂದಿಲ್ಲ. 

ಏನಿದು ಗೊಂದಲ?
ಸಿಂಗಾಪುರ ವಿಮಾನವನ್ನು ತಪ್ಪಿಸಿಕೊಂಡ  ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಗದ್ದಲ  ಉಂಟು ಮಾಡಿದರು ಹಾಗೂ  ಪ್ರತಿಭಟನೆಯನ್ನು ನಡೆಸಿದರು. ಅವರು ವಿಮಾನ ನಿಲ್ದಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಮ್ಮ ದೂರನ್ನು ದಾಖಲಿಸಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನಯಾನ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಪ್ರಯಾಣಿಕರಿಗೆ ಇ-ಮೇಲ್ ಮೂಲಕ ಹಾರಾಟದ ಸಮಯದಲ್ಲಿ ಬದಲಾವಣೆಯ ಬಗ್ಗೆ ತಿಳಿಸಲಾಗಿತ್ತು  ಎಂದು ಅವರು ಮಾಹಿತಿ ನೀಡಿದ್ದಾರೆ.

ದೂರು ದಾಖಲು, ಡಿಜಿಸಿಎ ತನಿಖೆ
ಇನ್ನು ಘಟನೆಯಿಂದ ಕೆರಳಿದ ಪ್ರಯಾಣಿಕರು ಅಮೃತಸರ ವಿಮಾನ ನಿಲ್ದಾಣದಲ್ಲಿಯೇ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ. ಅಂತೆಯೇ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ವೈಫಲ್ಯದ ಬಗ್ಗೆ ತನಿಖೆಗೆ ಆದೇಶಿಸಿದೆ.

"ಸುಮಾರು 280 ಪ್ರಯಾಣಿಕರು ಸಿಂಗಾಪುರಕ್ಕೆ ಪ್ರಯಾಣಿಸಬೇಕಾಗಿತ್ತು. ಆದರೆ 253 ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದು, ಇದರಿಂದಾಗಿ 30 ಕ್ಕೂ ಹೆಚ್ಚು ಪ್ರಯಾಣಿಕರು ಉಳಿದಿದ್ದಾರೆ" ಎಂದು ಅಮೃತಸರ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ. ಒಂದು ಗುಂಪಿನಲ್ಲಿ 30 ಜನರಿಗೆ ಟಿಕೆಟ್‌ಗಳನ್ನು ಕಾಯ್ದಿರಿಸಿದ ಟ್ರಾವೆಲ್ ಏಜೆಂಟ್, ವಿಮಾನದ ಸಮಯದಲ್ಲಿ ಬದಲಾವಣೆಯ ಬಗ್ಗೆ ಅವರಿಗೆ (ಪ್ರಯಾಣಿಕರಿಗೆ) ತಿಳಿಸಲಿಲ್ಲ, ಇದರಿಂದಾಗಿ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬಂದ  ಪ್ರಯಾಣಿಕರೊಂದಿಗೆ ವಿಮಾನವು ಹಾರಾಟ ನಡೆಸಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಗೋ ಫಸ್ಟ್ ವಿಮಾನವು 55 ಪ್ರಯಾಣಿಕರನ್ನು ಬಿಟ್ಟು ಹಾರಿದ್ದು ಇತ್ತೀಚೆಗೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

SCROLL FOR NEXT