ನವದೆಹಲಿ: ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್ಪಿ) ತರಲಾಗಿದ್ದ ಚಿರತೆಗಳ ಪೈಕಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಶೇ 40ರಷ್ಟು ಚಿರತೆಗಳ ಸಾವು ಉತ್ತಮ ಬೆಳವಣಿಗೆಯಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಅಲ್ಲದೆ, ಇದನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಬೇಡಿ ಮತ್ತು ಚಿರತೆಗಳನ್ನು ಬೇರೆ ಬೇರೆ ಸ್ಥಳಗಳಿಗೆ ಸ್ಥಳಾಂತರಿಸುವ ಸಾಧ್ಯತೆ ಬಗ್ಗೆ ಗಮನ ಹರಿಸಿ ಎಂದು ಕೇಂದ್ರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಚಿರತೆಗಳ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸಾವಿಗೆ ಕಾರಣಗಳು ಮತ್ತು ಪರಿಹಾರ ಕ್ರಮಗಳನ್ನು ತಿಳಿಸುವ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರವನ್ನು ಕೇಳಿದೆ.
'ಏನು ಸಮಸ್ಯೆ? ಹವಾಮಾನವು ಸರಿಹೊಂದುವುದಿಲ್ಲವೇ ಅಥವಾ ಬೇರೆ ಏನಾದರೂ ಕಾರಣ ಇದೆಯೇ? ತರಲಾಗಿದ್ದ 20 ಚಿರತೆಗಳಲ್ಲಿ ಎಂಟು ಚಿರತೆಗಳು ಸಾವಿಗೀಡಾಗಿವೆ. ಕಳೆದ ವಾರವಷ್ಟೇ ಎರಡು ಚಿರತೆಗಳು ಪ್ರಾಣ ಬಿಟ್ಟಿವೆ. ಹೀಗಿರುವಾಗ, ಅವುಗಳನ್ನು ವಿವಿಧ ಅಭಯಾರಣ್ಯಗಳಿಗೆ ವರ್ಗಾಯಿಸುವ ಸಾಧ್ಯತೆಯನ್ನು ನೀವು ಏಕೆ ಪರಿಗಣಿಸಬಾರದು? ನೀವು ಅದನ್ನು ಪ್ರತಿಷ್ಠೆಯ ವಿಷಯವಾಗಿ ಏಕೆ ಮಾಡುತ್ತಿದ್ದೀರಾ?' ದಯವಿಟ್ಟು ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ನ್ಯಾಯಾಲಯ ಹೇಳಿದೆ.
'ಚಿರತೆಗಳನ್ನು ಒಂದೇ ಸ್ಥಳದಲ್ಲಿ ಇರಿಸುವ ಬದಲು ಯಾವುದೇ ರಾಜ್ಯ ಅಥವಾ ಸರ್ಕಾರವನ್ನು ಲೆಕ್ಕಿಸದೆ ಇತರ ಅಭಯಾರಣ್ಯಗಳಿಗೆ ವರ್ಗಾಯಿಸುವ ಸಾಧ್ಯತೆಗಳ ಬಗ್ಗೆ ನೀವು ಗಮನಹರಿಸಬೇಕು' ಎಂದು ಪೀಠವು ಕೇಂದ್ರವನ್ನು ಪ್ರತಿನಿಧಿಸುತ್ತಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ತಿಳಿಸಿದೆ.
'ಚಿರತೆಗಳ ಸಾವಿಗೆ ಕಾರಣಗಳನ್ನು ವಿವರಿಸುವ ಅಫಿಡವಿಟ್ ಅನ್ನು ಕೇಂದ್ರವು ಸಲ್ಲಿಸಲಿದೆ ಮತ್ತು ಪ್ರತಿ ಚಿರತೆಯ ಸಾವಿನ ಸುತ್ತಲಿನ ಸಂದರ್ಭಗಳನ್ನು ತಿಳಿಸುವ ವಿವರವಾದ ಅಫಿಡವಿಟ್ ಸಲ್ಲಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದೆ' ಎಂದು ಭಾಟಿ ಹೇಳಿದರು.
ಇದನ್ನೂ ಓದಿ: ತಿಂಗಳ ಅವಧಿಯಲ್ಲಿ 2 ಸಾವು: ಕುನೊ ಉದ್ಯಾನದಿಂದ ಚೀತಾಗಳ ಬೇರೆಡೆ ಸ್ಥಳಾಂತರಿಸಿ; ಕೇಂದ್ರ ಸರ್ಕಾರಕ್ಕೆ ಮಧ್ಯಪ್ರದೇಶ ಪತ್ರ
ಈ ವೇಳೆ, ಕುನೊ ರಾಷ್ಟ್ರೀಯ ಉದ್ಯಾನವನದಿಂದ ಚಿರತೆಗಳನ್ನು ಇತರೆ ಅಭಯಾರಣ್ಯಗಳಿಗೆ ವರ್ಗಾಯಿಸುವುದು ಸೇರಿದಂತೆ ಎಲ್ಲಾ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಚಿರತೆಯ ಈ ಎಂಟು ಸಾವುಗಳು ದುರದೃಷ್ಟಕರ ಆದರೆ, ಅದು ನಿರೀಕ್ಷಿತ. ಈ ಸಾವುಗಳ ಹಿಂದೆ ಹಲವಾರು ಕಾರಣಗಳಿವೆ' ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಇದು ದೇಶದ ಪ್ರತಿಷ್ಠಿತ ಯೋಜನೆಯಾಗಿದ್ದು, ಚಿರತೆಗಳ ಇನ್ನಷ್ಟು ಹೆಚ್ಚಿನ ಸಾವುಗಳನ್ನು ತಡೆಯಲು ಅಧಿಕಾರಿಗಳು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಭಾಟಿ ಅವರ ಸಮರ್ಥನೆಗಳಿಗೆ ಪ್ರತಿಕ್ರಿಯಿಸಿದ ಪೀಠವು, 'ಈ ಯೋಜನೆಯು ದೇಶಕ್ಕೆ ತುಂಬಾ ಪ್ರತಿಷ್ಠಿತವಾಗಿದ್ದರೆ, ಒಂದು ವರ್ಷದಲ್ಲಿ ಇತರೆ ದೇಶಗಳಿಂದ ತರಲಾಗಿದ್ದ ಚಿರತೆಗಳ ಪೈಕಿ ಶೇ 40ರಷ್ಟು ಚಿರತೆಗಳು ಸಾವಿಗೀಡಾಗಿರುವುದು ಉತ್ತಮ ಬೆಳವಣಿಗೆ ಎಂದು ತೋರುವುದಿಲ್ಲ' ಎಂದಿತು.
ಹಿರಿಯ ವಕೀಲ ಪಿಸಿ ಸೇನ್, ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಸಾವನ್ನು ತಡೆಯಲು ತಜ್ಞರು ನೀಡಿದ ಕೆಲವು ಸಲಹೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು.
ಪೀಠವು ಭಾಟಿ ಅವರಿಗೆ ಈ ಸಲಹೆಗಳನ್ನು ನೀಡಲು ಸೇನ್ ಅವರಿಗೆ ಸೂಚಿಸಿತು ಮತ್ತು ಜುಲೈ 28-29ರೊಳಗೆ ಈ ಬಗ್ಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಹೇಳಿದ ನ್ಯಾಯಾಲಯ, ಆಗಸ್ಟ್ 1ಕ್ಕೆ ವಿಚಾರಣೆಯನ್ನು ಮುಂದೂಡಿತು.
ಜುಲೈ 14 ರಂದು, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರಗೊಂಡ ಸೂರಜ್ ಎಂಬ ಗಂಡು ಚಿರತೆ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವಿಗೀಡಾಯಿತು. ಈ ವರ್ಷದ ಮಾರ್ಚ್ನಿಂದ ಶಿಯೋಪುರ್ ಜಿಲ್ಲೆಯ ಉದ್ಯಾನವನದಲ್ಲಿ ಚಿರತೆಗಳ ಒಟ್ಟು ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.