ದೇಶ

ಜೈಲಿನಲ್ಲಿ ಕೊಲೆಗಾರರ ಜತೆ ಸಿಸೋಡಿಯಾ ಇರಿಸಿದ್ದು ಏಕೆ?: 'ರಾಜಕೀಯ ಕೊಲೆ'ಗೆ ಸಂಚು ಎಂದ ಆಪ್

Lingaraj Badiger

ನವದೆಹಲಿ: ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ತಿಹಾರ್‌ ಜೈಲಿನ ಸೆಲ್‌ ನಂಬರ್‌ 1ರಲ್ಲಿ ಇರಿಸಲಾಗಿದ್ದು, ಅದರ ಪಕ್ಕದ ವಾರ್ಡ್‌ ನಂ 9ರಲ್ಲಿ ಘೋರ ಕೊಲೆ ಅಪರಾಧಿಗಳನ್ನು ಇರಿಸಲಾಗಿದೆ. ಈ ಮೂಲಕ "ರಾಜಕೀಯ ಕೊಲೆ"ಗೆ ಸಂಚು ರೂಪಿಸಲಾಗಿದೆ ಎಂದು ಆಮ್‌ ಆದ್ಮಿ ಪಕ್ಷದ(ಎಎಪಿ) ನಾಯಕ ಸೌರಭ್‌ ಭಾರದ್ವಾಜ್‌ ಅವರು ಬುಧವಾರ ಆರೋಪಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸೌರಭ್‌ ಭಾರದ್ವಾಜ್‌ ಅವರು, ಇದೇ ಮೊದಲ ಬಾರಿಗೆ  ತಿಹಾರ್‌ ಜೈಲಿನ ಸೆಲ್‌ ನಂಬರ್‌ 1ರಲ್ಲಿ ಅಂಡರ್‌ಟ್ರಯಲ್ ಆರೋಪಿಯನ್ನು ಇರಿಸಲಾಗಿದೆ ಎಂದು ಹೇಳಿದ್ದಾರೆ.

"ಜೈಲ್ ನಂಬರ್ ಒಂದರಲ್ಲಿ ಹಲವಾರು ಕೊಲೆ ಪ್ರಕರಣಗಳನ್ನು ಹೊಂದಿರುವ ಅತ್ಯಂತ ಕಠಿಣ ಕ್ರಿಮಿನಲ್‌ಗಳಿದ್ದಾರೆ. ಅವರಲ್ಲಿ ಕೆಲವರು ಮಾನಸಿಕವಾಗಿ ಸ್ಥೈರ್ಯ ಸಹ ಕಳೆದುಕೊಂಡಿದ್ದಾರೆ. ಅವರ ವಿರುದ್ಧ ಇನ್ನೊಂದು ಪ್ರಕರಣ ದಾಖಲಿಸಿದರೂ ಪರವಾಗಿಲ್ಲ. ಆದರೆ ಕೇಂದ್ರ ಸರ್ಕಾರ ರಾಜಕೀಯ ಪ್ರತಿಸ್ಪರ್ಧಿಗಳನ್ನು ಕೊಲೆ ಮಾಡುತ್ತದೆಯೇ?" ಎಎಪಿ ನಾಯಕ ಪ್ರಶ್ನಿಸಿದ್ದಾರೆ.

"ಬಿಜೆಪಿಯ ಪಿತೂರಿಯಲ್ಲಿ ಸಿಲುಕಿಕೊಳ್ಳದಂತೆ ನಾನು ಜೈಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಜೈಲಿನಲ್ಲಿ ಅನೇಕ ಕೊಲೆಗಳು ನಡೆದಿವೆ. ಆದ್ದರಿಂದ ಸಿಸೋಡಿಯಾ ಅವರನ್ನು ಹತ್ಯೆ ಮಾಡಬಹುದು ಎಂಬ ಆತಂಕವಿದೆ" ಎಂದು ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

ಇದೇ ವೇಳೆ, ಸಿಸೋಡಿಯಾ ಅವರನ್ನು ವಿಪಾಸನಾ ಸೆಲ್‌ನಲ್ಲಿ ಇರಿಸಬೇಕೆಂಬ ನ್ಯಾಯಾಲಯದ ಆದೇಶವನ್ನು ಏಕೆ ಪಾಲಿಸುತ್ತಿಲ್ಲ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಪ್ರಶ್ನಿಸಿದರು. ಮೊದಲ ಬಾರಿಗೆ ಬಂದ ಯಾವುದೇ ಕೈದಿಯನ್ನು ಜೈಲಿನ ಸೆಲ್ ನಂಬರ್ ಒನ್ ನಲ್ಲಿ ಇರಿಸಲಾಗಿಲ್ಲ" ಎಂದು ಅವರು ಆರೋಪಿಸಿದ್ದಾರೆ.

SCROLL FOR NEXT